Friday, April 18, 2025
Google search engine

Homeರಾಜ್ಯಸುದ್ದಿಜಾಲಗುಂಡ್ಲುಪೇಟೆ: ನಿವೃತ್ತಿಗೊಂಡ ನೆಚ್ಚಿನ ಶಿಕ್ಷಕ ಅಬ್ದುಲ್ ಖಾದರ್ ಅವರಿಗೆ ಆತ್ಮೀಯ ಬೀಳ್ಕೊಡುಗೆ 

ಗುಂಡ್ಲುಪೇಟೆ: ನಿವೃತ್ತಿಗೊಂಡ ನೆಚ್ಚಿನ ಶಿಕ್ಷಕ ಅಬ್ದುಲ್ ಖಾದರ್ ಅವರಿಗೆ ಆತ್ಮೀಯ ಬೀಳ್ಕೊಡುಗೆ 

ಗುಂಡ್ಲುಪೇಟೆ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹುಲಸಗುಂದಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಅಬ್ದುಲ್ ಖಾದರ್ ರವರು ಜುಲೈ 31 ರಂದು ಶಿಕ್ಷಕ ವೃತ್ತಿ  ಸೇವೆಯಿಂದ ವಯೋನಿವೃತ್ತಿ ಹೊಂದಿದ ಹಿನ್ನೆಲೆ ಹುಲಸಗುಂದಿ ಶಾಲಾ ಆವರಣದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ವಿಜೃಂಭಣೆಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶಾಲಾ ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು ಹಾಗು ಭೀಮನಬೀಡು ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರುಗಳು ಬೀಳ್ಕೊಡುಗೆ ಕಾರ್ಯಕ್ರಮವನ್ನು ನೆರವೇರಿಸಿದರು.

ಅಬ್ದುಲ್ ಖಾದರ್ ರವರು ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿದ್ದು, ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇವರು ಸಹೃದಯಿ, ಸ್ನೇಹಜೀವಿ, ಸಮಯಪಾಲನೆ ಮತ್ತು ಸರಳತೆಯ ವ್ಯಕ್ತಿತ್ವದಿಂದಲೇ ಇಡೀ ತಾಲೂಕಿಗೆ ಚಿರಪರಿಚಿತರು. ಕನ್ನಡ ಮಾಧ್ಯಮ ಶಾಲೆಯಲ್ಲಿ ೨೭ ವರ್ಷಗಳ ಕಾಲ ದಣಿವರಿಯದೇ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ಕೆಲಸ ಮಾಡಿದ್ದಾರೆ. ಇವರ ಕನ್ನಡ ಪ್ರೇಮ ಮತ್ತು ವಾಕ್ಚಾತುರ್ಯ ನೋಡಿದರೆ ಇವರನ್ನು ಮುಸಲ್ಮಾನ ಬಾಂಧವರು ಎಂದು ಹೇಳಲಿಕ್ಕಾಗದು.

ಇವರು ೧೬ ವರ್ಷಗಳ ಕಾಲ ಗುಂಡ್ಲುಪೇಟೆ ತಾಲೂಕಿನ ಕೂತನೂರು ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದು, ಪಟ್ಟಣದ ಕುರುಬಗೇರಿ ಶಾಲೆ, ದೇವರಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಕೆಲ ತಿಂಗಳುಗಳ ಕಾಲ ನಿಯೋಜನೆ ಮೇರೆಗೆ ಕೆಲಸ ನಿರ್ವಹಿಸಿದ್ದಾರೆ. ಉಳಿದ ೧೧ ವರ್ಷಗಳ ಕಾಲ ಹುಲಸಗುಂದಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಹೊಂದಿರುತ್ತಾರೆ.

ಶ್ರೀಯುತರನ್ನು ಕುಟುಂಬ ಸಮೇತರಾಗಿ ಗೌರವಿಸಿ, ಸನ್ಮಾನಿಸಲಾಯಿತು. ಬೀಳ್ಕೊಡುಗೆ ಸಮಾರಂಭಕ್ಕೆ ಬಂದಿದ್ದ ಹಳೆಯ ವಿದ್ಯಾರ್ಥಿಗಳು ಹಾಗು ಇಷ್ಟು ವರ್ಷಗಳ ಕಾಲ ಸಹೋದ್ಯೋಗಿಗಳಾಗಿ ಜೊತೆ ಕರ್ತವ್ಯ ನಿರ್ವಹಿಸಿದವರೆಲ್ಲಾ ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಇವರೊಂದಿಗಿನ ವೃತ್ತಿಪರತೆ ಬಗ್ಗೆ, ಸಮಯಪಾಲನೆ ಬಗ್ಗೆ, ಗುರು-ಶಿಷ್ಯರ ಬಾಂಧವ್ಯದ ಬಗ್ಗೆ ವಿವರಿಸುತ್ತಾ ಭಾವುಕ ನುಡಿಗಳನ್ನಾಡಿದರು.

ಶಿಕ್ಷಕರೊಬ್ಬರು ಮಾತನಾಡುತ್ತಾ ಒಂದು ದಿನಕ್ಕೂ ಸಹೋದ್ಯೋಗಳಿಗೆ ಗದರಿದವರಲ್ಲ, ಕೋಪ ಮಾಡಿಕೊಂಡವರಲ್ಲ. ಕಿರಿಯ ಅತಿಥಿ ಶಿಕ್ಷಕರನ್ನೂ ಕೂಡ ತಮ್ಮ ಮಕ್ಕಳಂತೆ ಕಾಣುತ್ತಾರೆ ಎಂದು ಹೇಳುತ್ತಾ ಭಾವುಕರಾದರು. ತಮ್ಮ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಅಧಿಕಾರಿ ವರ್ಗದವರು, ಸಹೋದ್ಯೋಗಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಪುಸ್ತಕ,ಹಾರ ತುರಾಯಿಗಳ ಮೂಲಕ ಸನ್ಮಾನಿಸುವುದರೊಂದಿಗೆ ಹಾರೈಸಿದರು.   

ಈ ಸಂದರ್ಭದಲ್ಲಿ ಅಧಿಕಾರಿ ವರ್ಗದವರು, ಶಾಲಾ ಶಿಕ್ಷಕರು , ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗು ಸದಸ್ಯರುಗಳು, ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರುಗಳು ಮತ್ತು ಅಬ್ದುಲ್ ಖಾದರ್ ಸರ್ ರವರ ಕುಟುಂಬಸ್ಥರು ಹಾಜರಿದ್ದರು.

RELATED ARTICLES
- Advertisment -
Google search engine

Most Popular