ಕನಕಪುರ: ದೇಗುಲಮಠದ ಹಿರಿಯಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಗುರು ಕೋರಣ್ಯವನ್ನು ಎರಡು ದಿನಗಳ ಕಾಲ ನಗರದಲ್ಲಿ ನಡೆಸಿದರು.
ಗೌರಿ ಗಣೇಶ ಹಬ್ಬದಲ್ಲಿ ಮಠದ ಭಕ್ತರ ಮನೆಗಳಿಗೆ ತೆರಳಿ ಗುರು ಕೋರಣ್ಯ ಮಾಡುವುದು ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಂತೆ ಈ ವರ್ಷವೂ ದೇಗುಲ ಮಠದಿಂದ ಗುರು ಕೋರಣ್ಯ ನಡೆಸಿದರು.
ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ, ಬಿಲ್ವಪತ್ರೆ ಮಠದ ಶಿವಲಿಂಗ ಸ್ವಾಮೀಜಿ, ಮರಳವಾಡಿ ಮಠದ ಕಿರಿಯಶ್ರೀ ಪ್ರಭು ಕಿರೀಟ ಸ್ವಾಮೀಜಿ, ಅತ್ತಿಹಳ್ಳಿ ಮಠದ ಕಿರಿಯಶ್ರೀ ನಿರಂಜನ ಸ್ವಾಮೀಜಿ, ತೋಟಳ್ಳಿ ಮಠದ ಬಸವಪ್ರಭು ಸ್ವಾಮೀಜಿ ಕನಕಪುರ ನಗರದಲ್ಲಿ ಗುರು ಕೋರಣ್ಯವನ್ನು ನಡೆಸಿದರು.
ಐವರು ಸ್ವಾಮೀಜಿಗಳು 5 ತಂಡಗಳಾಗಿ ಕೋಟೆ, ಕೆಂಕೇರಮ್ಮ ಬಡಾವಣೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ, ಮಹದೇಶ್ವರ ಬಡಾವಣೆ, ಮುನಿಸಿಪಲ್ ಹೈ ಸ್ಕೂಲ್, ಶಿಕ್ಷಕರ ಭವನ ರಸ್ತೆ, ನಿರ್ವಹಣೆಶ್ವರ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಭಕ್ತರಿಂದ ಧವಸ ಧಾನ್ಯ, ಹಣ್ಣು, ತರಕಾರಿ ಇತ್ಯಾದಿ ಪರಿಕರಗಳನ್ನು ಸ್ವೀಕರಿಸಿದರು.
ಕೋರಣ್ಯದ ವೇಳೆ ಭಜನೆ ತಂಡಗಳು ಜೊತೆಯಲ್ಲಿದ್ದು ಕೋರಣ್ಯಕ್ಕೆ ಸಹಕಾರ ನೀಡಿದರು. ದೇಗುಲ ಮಠದ ಹಳೆಯ ವಿದ್ಯಾರ್ಥಿಗಳು, ಶಿಕ್ಷಕವೃಂದದವರು, ನೌಕರರು ಹಾಗೂ ವೀರಶೈವ ತರುಣರು ಪಾಲ್ಗೊಂಡಿದ್ದರು.