ಎಚ್.ಡಿ.ಕೋಟೆ: ಕಳೆದ ಹತ್ತಾರು ತಿಂಗಳಿನಿಂದ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಚಿರತೆ ಸೆರೆಗೆ ಹೌಸಿಂಗ್ ಬೋರ್ಡ್ ಕಾಲೋನಿ ಸಮೀಪದ ರೈತ ಗುಂಟುಮಲ್ಲು ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಆಹಾರ ಹರಸಿ ಬಂದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ಪಟ್ಟಣದ ಆಸುಪಾಸಿನ ಗ್ರಾಮಗಳಾದ ಹೊಸತೊರವಳ್ಳಿ, ಬೆಳಗನಹಳ್ಳಿ, ಶಾಂತಿಪುರ(ಹೆಬ್ಬಳ), ವಡ್ಡರಗುಡಿ ಸೇರಿದಂತೆ ಅನೇಕ ಗ್ರಾಮಗಳ ಜನರು ಚಿರತೆ ಹಾವಳಿಯಿಂದಾಗಿ ಜಮೀನಿನಲ್ಲಿ ಕೆಲಸಮಾಡಲು ಹಾಗೂ ಒಬ್ಬೊಬ್ಬರೆ ತಿರುಗಾಡಲು ಭಯಪಡುವಂತಾಗಿತ್ತು.
ಚಿರತೆ ಸೆರೆಹಿಡಿಯವಂತೆ ಜನಸಾಮಾನ್ಯರ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.ಚಿರತೆಯ ಚಲನವಲನಗಳ ಬಗ್ಗೆ ಕಳೆದ ರಾತ್ರಿ ರೈತ ಗುಂಟು ಮಲ್ಲು ಅರಣ್ಯ ಇಲಾಖೆಗೆ ನೀಡಿದ ಖಚಿತ ಮಾಹಿತಿ ಮೇರೆಗೆ ಹೆಚ್.ಡಿ.ಕೋಟೆ ವಲಯದ ಅರಣ್ಯ ಸಿಬ್ಬಂದಿ ಕಳೆದ ರಾತ್ರಿ ಬೋನಿನ ಒಳಗೆ ನಾಯಿ ಕಟ್ಟಿ ಇರಿಸಿದ್ದರು. ನಾಯಿ ಬೇಟೆಯಾಡಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಈ ಭಾಗದಲ್ಲಿ ಹುಲಿ ಅಥವಾ ಚಿರತೆ ಇರುವ ಶಂಕೆ ವ್ಯಕ್ತವಾಗಿತ್ತು. ಮೇಕೆ, ಕುರಿ ಸೇರಿದಂತೆ ಜಾನುವಾರುಗಳನ್ನು ಚಿರತೆ ಬಲಿ ಪಡೆದಿತ್ತು. ಕಳೆದ ವರ್ಷದಿಂದ ಇದರ ಉಪಟಳ ಹೆಚ್ಚಾಗಿತ್ತು ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಎರಡು ದಿನಗಳ ಹಿಂದೆ ಪಟ್ಟಣದ ಸರ್ವೆ ನಂಬರ್ 57ರಲ್ಲಿ ಬೋನು ಇರಿಸಿದ್ದರು. ನಿನ್ನೆ ರಾತ್ರಿ 9:30ರಲ್ಲಿ ಚಿರತೆ ಬೋನಿಗೆ ಬಿದ್ದಿದೆ.
- ವಿವೇಕ್, ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ