ಹನಗೋಡು: ಕೇರಳಿಗರ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಓಣಂ ಹಬ್ಬವನ್ನು ಹನಗೋಡು ಭಾಗದಲ್ಲಿ ನೆಲಸಿರುವ ಕೇರಳ ಮೂಲದವರು ಸಂತಸ ಸಡಗರದಿಂದ ಆಚರಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ, ಬಿಲ್ಲೇನಹೊಸಹಳ್ಳಿ, ಕಚುವಿನಹಳ್ಳಿ, ಕಿಕ್ಕೇರಿಕಟ್ಟೆ ಹೆಬ್ಬಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ನೆಲಸಿರುವ ಕೇರಳ ಮೂಲದವರು ತಮ್ಮ ಸಂಸ್ಕೃತಿ ಮತ್ತು ಸಾಂಪ್ರದಾಯಿಕದಂತೆ ಮನೆ ಮುಂದಿನ ಅಂಗಳದಲ್ಲಿ ಹೂವಿನ ರಂಗೋಲಿ (ಪೂಕಳಂ) ನಡುವೆ ಬೆಳಗುವ ಹಣತೆ ಇಟ್ಟು, ಬಣ್ಣ ಬಣ್ಣದ ರಂಗೋಲಿ ಹಾಕಿ ಕಂಗೊಳಿಸುವಂತೆ ಅಲಂಕಾರಿಸಿದ್ದರು.

ಓಣಂ ಹಬ್ಬವು ಕೇರಳಿಗರು ತಮ್ಮ ಕೃಷಿಯ ಹಿನ್ನೆಲೆಯಲ್ಲಿ ಆಚರಿಸಲ್ಪಡುವ ಈ ಹಬ್ಬವಾಗಿದ್ದು, ಮುಂಗಾರಿನ ಗಾಳಿ-ಮಳೆಯಲ್ಲಿ ದುಡಿದು ಬೆಂಡಾದ ಜೀವಗಳು ಸಂತಸದಿಂದ ಸಂಭ್ರಮಿಸುವ ಓಣಂ ಹಬ್ಬವಾಗಿದ್ದು, ಇದಲ್ಲದೆ ಕೇರಳದಲ್ಲಿ ಬಲಿರಾಜನು ಓಣಂ ಹಬ್ಬದಂದು ತನ್ನ ಪ್ರಜೆಗಳನ್ನು ಭೇಟಿ ಮಾಡಲು ಮತ್ತು ಅವರ ಎಲ್ಲಾ ತೊಂದರೆಗಳನ್ನು ತೆಗೆದು ಹಾಕಲು ಬರುತ್ತಾನೆ ಎಂಬ ನಂಬಿಕೆಯಿರುವ ಹಬ್ಬವಾಗಿದೆ. ಇದರೊಂದಿಗೆ ಕೃಷಿಕರು ತಮ್ಮ ಕೃಷಿಯಲ್ಲಿ
ಉತ್ತಮ ಫಸಲು ಮತ್ತು ಇಳುವರಿಗಾಗಿ ಈ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಓಣಂ ಹಬ್ಬ ಆಚರಿಸುವ ಬಿಲ್ಲೇನಹೊಸಹಳ್ಳಿಯ ನಿವಾಸಿ ಜಾನ್ಸನ್ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.