ಮೈಸೂರು: ಮೈಕ್ರೋ ಫೈನಾನ್ಸ್ ಮತ್ತು ಮೀಟರ್ ಬಡ್ಡಿಯವರ ಕಿರುಕುಳಕ್ಕೆ ಹೆದರಿ ಚಾಮರಾಜನಗರ ಜಿಲ್ಲೆ ಯಳಂದೂರಿನ 80ಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದ ಪ್ರಕರಣ ಮಾಸುವ ಮುನ್ನವೇ, ಇದೀಗ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸೇರಿ ಹಲವು ಗ್ರಾಮಗಳ 100ಕ್ಕೂ ಹೆಚ್ಚು ಕುಟುಂಬಗಳು ಮನೆಗೆ ಬೀಗ ಹಾಕಿ ಗ್ರಾಮ ತೊರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಲ ಪಡೆದಿರುವ ಕುಟುಂಬಗಳ ಮನೆಗಳ ಮುಂಭಾಗದಲ್ಲಿ ಫಲಕ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಕೆಲವು ಮನೆಗಳಿಗೆ ಬೀಗ ಜಡಿದು ಕುಟುಂಬದವರನ್ನು ಹೊರದಬ್ಬಿರುವ ಘಟನೆಯೂ ನಡೆದಿದೆ ಎನ್ನಲಾಗಿದೆ.
ಸರಕಾರ ಮಧ್ಯಪ್ರವೇಶಿಸಲಿ
ಗ್ರಾಮಶಕ್ತಿ, ಫೈವ್ ಸ್ಟಾರ್, ಎಲ್ ಆ್ಯಂಡ್ ಟಿ, ಬಂಧನ್ ಮೈಕ್ರೋ ಫೈನಾನ್ಸ್ಗಳು ಆಮಿಷಗಳನ್ನು ಒಡ್ಡಿ ಬಲವಂತವಾಗಿ ಸಾಲ ಕೊಡುವ ಮೈಕ್ರೋ ಫೈನಾನ್ಸ್ಗಳು ಅನಂತರ ವಸೂಲಿಗೆ ಅನ್ಯ ಮಾರ್ಗಗಳನ್ನು ಹಿಡಿದು ಕಿರುಕುಳ ನೀಡುತ್ತಿವೆ. ಇದರ ಬಗ್ಗೆ ಸರಕಾರ ಮಧ್ಯ ಪ್ರವೇಶಿಸಿ ಗ್ರಾಮದಿಂದ ಹೋಗಿರುವವರನ್ನು ಮರಳಿ ಕರೆತರಬೇಕೆಂದು ಮುಖಂಡರಾದ ಶಿರಮಲ್ಲಿ ಹುಚ್ಚಯ್ಯ ಆಗ್ರಹಿಸಿದ್ದಾರೆ.
ಸಾಲ ಕಟ್ಟದೇ ಕುಟುಂಬಗಳು ಗ್ರಾಮಗಳನ್ನು ತೊರೆದಿರುವುದು ನಮಗೆ ಗೊತ್ತಿಲ್ಲ. ಫೈನಾನ್ಸ್ ಹಾವಳಿ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಂಜನಗೂಡು ತಾಲೂಕಿನಲ್ಲಿರುವ ಖಾಸಗಿ ಫೈನಾನ್ಸ್ನವರನ್ನು ಕರೆಸಿ ಶೀಘ್ರದಲ್ಲೇ ಸಭೆ ಮಾಡಿ ಹಣ ಕಟ್ಟಲು ಕಾಲಾವಕಾಶ ನೀಡುವಂತೆ ನಿರ್ದೇಶನ ನೀಡಲಾಗುವುದು.
-ಶಿವಕುಮಾರ್ ಕಾಸ್ನೂರು, ತಹಶೀಲ್ದಾರ್ ನಂಜನಗೂಡು