ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆ ಮಕ್ಕಳಿಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ತಿಳಿಸಿದರು.
ಚಾಮರಾಜನಗರ ತಾಲ್ಲೂಕು ಕೋಳಿಪಾಳ್ಯದಲ್ಲಿರುವ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಜೆ.ಎಸ್.ಎಸ್ ಉನ್ನತ ಶಿಕ್ಷಣ ಸಂಸ್ಥೆ ವಾಕ್ ಮತ್ತು ಶ್ರವಣ ಸಂಸ್ಥೆಗಳ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಇದು ಜಿಲ್ಲೆಯಲ್ಲಿ ಮೊದಲನೇ ಆರೋಗ್ಯ ತಪಾಸಣಾ ಶಿಬಿರವಾಗಿದ್ದು ರಂಗಸಂದ್ರ, ಪುಣಜನೂರು, ಕೋಳಿಪಾಳ್ಯ, ಆಶ್ರಮ ಶಾಲೆಗಳ ೧೩೬ ಮಕ್ಕಳಿಗೆ ಕಿವಿ, ಮೂಗು, ಗಂಟಲು, ರಕ್ತಪರೀಕ್ಷೆ , ದಂತಪರೀಕ್ಷೆ, ಕಣ್ಣುಪರೀಕ್ಷೆ, ದೃಷ್ಠಿಪರೀಕ್ಷೆಯನ್ನು ೪೦ ಜನ ವೈದ್ಯರ ತಂಡ ತಪಾಸಣೆ ನಡೆಸಿದೆ.
ಇದು ಕರ್ನಾಟಕದ ಗಡಿಭಾಗವಾಗಿದ್ದು ಸೋಲಿಗ ಮತ್ತು ಲಂಬಾಣಿ ಜನಾಂಗದ ಮಕ್ಕಳು ಹೆಚ್ಚಾಗಿದ್ದಾರೆ. ಜಿಲ್ಲೆಯ ೨೦ ಆಶ್ರಮ ಶಾಲೆಗಳಲ್ಲಿ ಸುಮಾರು ೨ ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಉಚಿತ ಚಿಕಿತ್ಸೆಯ ಜೊತೆಗೆ ಉಚಿತವಾಗಿ ಔಷಧಿಯನ್ನು ವಿತರಿಸಲಾಗುವುದು ಎಂದ ಅವರು ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಮೈಸೂರಿಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುವುದು ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ಅವರ ಆರೋಗ್ಯದ ಕಡೆಗೂ ಹೆಚ್ಚು ಗಮನ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ತಜ್ಞ ವೈದ್ಯರುಗಳಾದ ಡಾ.ಮಹಾದೇವಪ್ಪ, ಡಾ.ಇಂದಿರಾ.ಎಂ.ಡಿ, ಡಾ.ಕೆ.ಬಿ. ಚೇತಕ್, ಡಾ.ರವೀಶ್ಗಣಿ, ವಿಜಯ್ರಾಜ ತಾಲ್ಲೂಕು ಕಲ್ಯಾಣಾಧಿಕಾರಿ ಸುಬ್ಬರಾಯ, ಹೇಮಚಂದ್ರ ಮುಖ್ಯಶಿಕ್ಷಕರುಗಳಾದ ಸಿ. ಕುಮಾರಸ್ವಾಮಿ, ಸೋಮಣ್ಣ, ಬಸವಣ್ಣ, ನಿಧಿಮಂಜುನಾಥ ಹಾಜರಿದ್ದರು.