Friday, January 9, 2026
Google search engine

Homeಅಡುಗೆಸಿರಿಧಾನ್ಯಗಳಿಂದ ಆರೋಗ್ಯಯುತ ಜೀವನಶೈಲಿ!

ಸಿರಿಧಾನ್ಯಗಳಿಂದ ಆರೋಗ್ಯಯುತ ಜೀವನಶೈಲಿ!

  • ಶಂಶೀರ್ ಬುಡೋಳಿ

ಸಿರಿಧಾನ್ಯಗಳಿಂದ ತಯಾರಿಸಲ್ಪಡುವ ವಿಭಿನ್ನ ರೀತಿಯ ಖಾದ್ಯಗಳಿಂದ ಆರೋಗ್ಯಯುತ ಜೀವನಶೈಲಿ ನಮ್ಮದಾಗಿಸಿಕೊಳ್ಳಬಹುದು. ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲದೇ ಕೃಷಿಗೂ ಪೂರಕವಾಗಿರುವ ಸಿರಿಧಾನ್ಯ ಬೆಳೆಗಳು ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ಪರಿಸರ ಸಂರಕ್ಷಣೆಗೆ ಉತ್ತಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಹೇಳಿದರು.
ಅವರು ಬುಧವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಇದು ಉತ್ತಮ ಆರೋಗ್ಯಕ್ಕೆ ಉಪಯುಕ್ತವಾದ ಆಹಾರಗಳು. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ನೀರಿನ ಉಳಿತಾಯದ ಜೊತೆಗೆ ಮನುಷ್ಯರಿಗೂ, ಜಾನುವಾರುಗಳಿಗೂ ಹಾಗೂ ಪರಿಸರ ಸಂರಕ್ಷಣೆಗೆ ಉಪಯುಕ್ತ ಎಂದು ಅವರು ಹೇಳಿದರು. ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಬೇಕು. ಜಂಕ್ ಫುಡ್‍ಗಳನ್ನು ಬಿಟ್ಟು ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಉತ್ತಮ ಎಂದು ಅವರು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ಮಾತನಾಡಿ, ಹಿಂದಿನ ಕಾಲದ ನಮ್ಮ ಹಿರಿಯರ ಆಹಾರ ಪದ್ಧತಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತದೆ ಎಂದು ಹೇಳಿದರು. ಸಿರಿಧಾನ್ಯಗಳಿಗೆ ರಕ್ತದೊತ್ತಡ, ಮಧುಮೇಹ ರೋಗಗಳ ನಿಯಂತ್ರಿಸುವ ಗುಣವಿದ್ದು, ಆರೋಗ್ಯ ಸಮಸ್ಯೆಗಳನ್ನು ತಡೆಯಲು ಇದು ಸಹಕಾರಿ ಎಂದು ಹೇಳಿದರು. ಸಿರಿಧಾನ್ಯಗಳನ್ನು ಬೆಳೆಯುವುದು ಮತ್ತು ಉತ್ತೇಜನ ನೀಡುವ ಮತ್ತು ಅವುಗಳ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಉಪ ಕೃಷಿ ನಿರ್ದೇಶಕ ಅಶೋಕ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ, ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಆಹಾರ ವಿಜ್ಞಾನಿ ಡಾ. ಫಝಲ್ ಎ.ಎ, ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಮಾರುತೇಶ್ ಎ.ಎಂ, ಡಾ. ನಿಟ್ಟೆ ವಿಶ್ವವಿದ್ಯಾಲಯದ ಆಹಾರ ಸುರಕ್ಷತೆ ಮತ್ತು ಪೋಷಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಮತ ಬಿ.ಎಸ್ ಅವರು ಪಾಲ್ಗೊಂಡಿದ್ದರು.
ರುಚಿಕರ ಖಾದ್ಯ- ಆಕರ್ಷಕ ತಿನಿಸುಗಳು
ಈ ಪಾಕಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 51 ಜನರು ಭಾಗವಹಿಸಿದ್ದರು. ಮರೆತುಹೋದ ಖಾದ್ಯ ವಿಭಾಗದಲ್ಲಿ ಒಟ್ಟು 10 ಜನ, ಸಿರಿಧಾನ್ಯ ಖಾರ ವಿಭಾಗದಲ್ಲಿ ಒಟ್ಟು 17 ಜನ, ಸಿರಿಧಾನ್ಯ ಸಿಹಿ ವಿಭಾಗದಲ್ಲಿ ಒಟ್ಟು 24 ಜನ ಭಾಗವಹಿಸಿ ವಿವಿಧ ಖಾದ್ಯಗಳಾದ ಕಜೆ ಲಡ್ಡು, ಪತ್ರೊಡೆ, ತುಳುವಿನಲ್ಲಿ ಕರೆಯಲ್ಪುಡುವ ನಾಣಿಲ್, ಒಲ್ಲೆದ ಕೊಡಿ, ತೇರೆದ ಕೊಡಿ ವಿವಿಧ ಬಗೆಯ ಕಾಡುಸೊಪ್ಪಿನ ಚಟ್ನಿಗಳು, ರಾಗಿ ಲಡ್ಡು, ಜೋಳದ ರೊಟ್ಟಿ, ನವಣೆ ಉಪ್ಪಿಟ್ಟು, ನವಣೆ ಬಿಸಿಬೇಳೆಬಾತ್, ಜೋಳದ ಹಿಟ್ಟಿನಿಂದ ತಯಾರಿಸಿದ ಕೇಕ್, ಈರೋಳ್ ಜ್ಯೂಸ್, ಬೇಳೆ ಪಡ್ಡು, ನವಣೆ ಬರ್ಫಿ, ರಾಗಿ ಸಿಹಿ ಕಡುಬು, ಹನಿ ಮಿಲೆಟ್, ಸಿರಿಧಾನ್ಯ ಸುಕ್ಕಿನ ಉಂಡೆ, ನವಣೆ ಕ್ಯಾಪ್ಸಿಕಂ ಕಬಾಬ್, ಸಾಮೆ ತರಕಾರಿ ಬಿರಿಯಾನಿ, ಸಿರಿಧಾನ್ಯ ವಡೆ, ರಾಗಿ ಇಡ್ಲಿ, ಬರಗು ಉಪ್ಪಿಟ್ಟು, ನುಗ್ಗೆ ಸೊಪ್ಪಿನ ರೊಟ್ಟಿ, ಸಿರಿಧಾನ್ಯ ಕಿಚ್ಡಿ, ಹಾರಕ ಹಲಸಿನ ಗುಜ್ಜಿ ಬಿರಿಯಾನಿ, ಹಲಸಿನ ಹೋಳಿಗೆ, ಸಿರಿಧಾನ್ಯ ಕುಕೀಸ್, ನವಣೆ ಸಿಲ್ಕ್ ಫ್ಯೂಜನ್ ಡೆಸರ್ಟ್, ರಾಗಿ ಹಲ್ವ, ಸಿರಿಧಾನ್ಯ ಪೊಂಗಲ್ ವಿಶಿಷ್ಟವಾಗಿ ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿದರು.
ಬಹುಮಾನ ವಿಜೇತರು :
ಸಿರಿಧಾನ್ಯ ಖಾರ ಖಾದ್ಯಗಳ ವಿಭಾಗದಲ್ಲಿ ಪ್ರಥಮ ಬಹುಮಾನ ಜಯಶ್ರೀ ಅತ್ತಾವರ, ದ್ವಿತೀಯ ಬಹುಮಾನ ರಾಜೇಶ್ವರಿ ಎನ್, ತೃತೀಯ ಬಹುಮಾನ ಎಂ.ಪಿ ರೋಹಿಣಿ ಆಚಾರ್ಯ ಪಡೆದರು.
ಸಿರಿಧಾನ್ಯ ಸಿಹಿ ಖಾದ್ಯಗಳ ವಿಭಾಗದಲ್ಲಿ ಪ್ರಥಮ ಬಹುಮಾನ ವಿಮಲಾ ರಾಜು, ದ್ವಿತೀಯ ಬಹುಮಾನ ವಿವೇಕ ಆಳ್ವ, ತೃತೀಯ ಬಹುಮಾನ ಪ್ರಜ್ವಲ್ ಎಂ. ಪಡೆದರು.
ಮರೆತುಹೋದ ಖಾದ್ಯಗಳ ವಿಭಾಗದಲ್ಲಿ ಪ್ರಥಮ ಬಹುಮಾನ ಶಶ್ಮಿ ಭಟ್, ದ್ವಿತೀಯ ಬಹುಮಾನ ಸ್ಮಿತಾ ವಿವೇಕ್, ತೃತೀಯ ಬಹುಮಾನ ಸುನೀತಾ ಹರೀಶ್ ಪಡೆದರು. ಪಾಕಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular