ಮಂಡ್ಯ: ಮಾನವೀಯತೆ, ಸಂಬಂಧಗಳ ಬಲ, ಮಮತೆ ಮತ್ತು ಕರುಣೆ ಎನ್ನುವ ಬದಲಿಗೆ ಇಂದು ಕೆಲವು ವ್ಯಕ್ತಿಗಳ ನಡೆ ದೌರ್ಜನ್ಯಕ್ಕೆ ಹೊಸ ಅರ್ಥ ನೀಡುತ್ತಿದೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ 82 ವರ್ಷದ ವೃದ್ಧನನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನೆಯಿಂದ ಹೊರಹಾಕಿದ ಘಟನೆ ಇನ್ನೂ ಮಾಸಿಲ್ಲ. ಇದರ ಬೆನ್ನಲ್ಲೇ ಮಂಡ್ಯದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಮಾನಸಿಕ ಅಸ್ವಸ್ಥಳಾದ ತಾಯಿಯನ್ನು ಮಗನೊಬ್ಬ ಬೀದಿಗೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಸುಮಾರು 70 ರಿಂದ 80 ವರ್ಷ ವಯಸ್ಸಿನ ವೃದ್ಧೆ, ತಮ್ಮ ಮಗನ ನಿರೀಕ್ಷೆಯಲ್ಲಿ ರಸ್ತೆಯ ಪಕ್ಕ ನಿಂತು, “ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ” ಎಂಬ ನಿರೀಕ್ಷೆಯ ಮಾತುಗಳನ್ನು ನುಡಿಯುತ್ತಿರುವ ದೃಶ್ಯಗಳು ಮನ ಕಲುಕುವಂತಿದೆ. ಮಹಿಳೆಯನ್ನು ರಸ್ತೆ ಬಳಿ ಬಿಟ್ಟು, “ಇಲ್ಲೇ ಇರು, ಬರುತ್ತೀನಿ” ಎಂದು ನಂಬಿಸಿ ಮಗನು ಹೋಗಿರುವುದು ಶಂಕೆ ಮೂಡಿಸಿದೆ.
ಸ್ಥಳೀಯರು ಮಾನವೀಯತೆ ಮೆರೆದಿದ್ದು, ಆ ವೃದ್ಧೆಗೆ ತಕ್ಷಣವೇ ಆಹಾರ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ವೃದ್ಧೆಯನ್ನು ರಕ್ಷಿಸಿ, ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮಿಮ್ಸ್) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯು ಒಂದು ಗಂಭೀರ ಸಾಮಾಜಿಕ ಪ್ರಶ್ನೆಯನ್ನು ಎಸೆದು ಹೋಗುತ್ತಿದೆ: ತಮ್ಮ ಜೀವನವನ್ನೇ ಮೀರಿ ಮಕ್ಕಳಿಗಾಗಿ ತ್ಯಾಗಮಾಡಿದ ತಾಯಿಗೆ ಮಗು ತಿರುಗಿ ನೀಡಿರುವುದು ಏನು? ಇಂತಹ ಕ್ರೂರ ನಡೆಗೆ ಸಮಾಜ ತಲೆಬಾಗಬೇಕಾಗಿದೆ. ಆಸ್ತಿಗಾಗಿ, ಆನಂದಕ್ಕಾಗಿ ಅಥವಾ ತೊಂದರೆ ತಪ್ಪಿಸಿಕೊಳ್ಳಲು ತಮ್ಮ ಹೆತ್ತವರನ್ನು ಬೀದಿಗೆ ಬಿಟ್ಟುಬಿಡುವುದು ನಿಜಕ್ಕೂ ನಾಚಿಕೆಗೆ ಕಾರಣ.