ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್. ಜಂಕ್ಷನ್ ನಿಂದ ಅಯ್ಯಪ್ಪ ಗುಡಿಯವರೆಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಮಾಡಿರುವ ಮಾರ್ಪಾಡಿನಿಂದ ಬೈಕಂಪಾಡಿಯಿಂದ ನಂತೂರು ವರೆಗೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಬೆಳಗ್ಗೆಯಿಂದಲೇ ಕೊಟ್ಟಾರ ಚೌಕಿ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಕಾಣಿಸಿಕೊಂಡಿದೆ. ಕಿಲೋ ಮೀಟರ್ ವರೆಗೆ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ. ಈ ಕಡೆ ಕೆಪಿಟಿ, ನಂತೂರು, ಕೊಟ್ಟಾರದ ವರೆಗೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೆ, ಸೇತುವೆಯಿಂದ ಮುಂದಕ್ಕೆ ಬೈಕಂಪಾಡಿಯನ್ನು ದಾಟಿ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿವೆ.