ಬೆಂಗಳೂರು: ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿ ಖಂಡಿಸಿ ಮೈಸೂರು ಚಲೋ ಹಮ್ಮಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ.
ಮಧ್ಯಾಹ್ನ 3.30 ಕ್ಕೆ ಶಾಂತಿಯುತವಾಗಿ, ಸೀಮಿತ ಅವಧಿಯಲ್ಲಿ ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅರ್ಜಿದಾರ ಸಂಘಟನೆಗೆ ಅನುಮತಿ ನೀಡಲು ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಪ್ರತಿಭಟನೆ ನಡೆಯುವ ಜಾಗಕ್ಕೆ ಸೀಮಿತವಾಗಿ 144 ಸೆಕ್ಷನ್ ತೆರವುಗೊಳಿಸಬೇಕು ಎಂದೂ ಆಯುಕ್ತರಿಗೆ ಪೀಠ ಸೂಚಿಸಿದೆ.
ಅರ್ಜಿದಾರರು 1 ಲಕ್ಷ ರೂ. ಮೊತ್ತದ ಬಾಂಡ್ ಸಲ್ಲಿಸಬೇಕು. ಅಹಿತಕರ ಘಟನೆ ನಡೆದರೆ ಅರ್ಜಿದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು, ಇಡೀ ಪ್ರತಿಭಟನೆಯನ್ನು ಅರ್ಜಿದಾರರು, ಪೊಲೀಸರು ಇಬ್ಬರೂ ವಿಡಿಯೋ ರೆಕಾರ್ಡಿಂಗ್ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.