ಬೆಂಗಳೂರು: ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯಿತು. ಸರ್ಕಾರವು ಇದು ಸಾಮಾಜಿಕ, ಆರ್ಥಿ, ಶೈಕ್ಷಣಿಕ ಸರ್ವೆಯಾಗಿದೆ ಎಂಬುದಾಗಿ ವಾದಿಸಿತು. ಈ ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.
ರಾಜ್ಯ ಸರ್ಕಾರ ನಡೆಸುತ್ತಿರುವಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿ, ಅಂಕಿ ಅಂಶ ಸಂಗ್ರಹಕ್ಕೂ ಪ್ರತ್ಯೇಕ ಕಾಯ್ದೆ ಇದೆ. ಆ ಕಾಯ್ದೆಯಲ್ಲಿ ರಾಜ್ಯಕ್ಕೆ ಅಂಕಿ ಅಂಶ ಸಂಗ್ರಹದ ಅಧಿಕಾರ ನೀಡಲಾಗಿಲ್ಲ. ಹಿಂದೆಂದೂ ಇತರೆ ಧರ್ಮದೊಂದಿಗೆ ಜಾತಿಯನ್ನು ಸೇರಿಸಲಾಗಿರಲಿಲ್ಲ ಎಂದು ವಾದಿಸಿದರು.
ಬಣಜಿಗ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಚೆರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್ ಹೀಗೆ 35 ರಿಂದ 40 ಧರ್ಮ ಮಿಶ್ರಿತ ಜಾತಿಗಳನ್ನು ಗುರುತಿಸಿದ್ದಾರೆ. 2002ರ ಜಾತಿಗಳ ಅಧಿಸೂಚನೆಗೂ ಈಗಿನ ಜಾತಿಗಳ ಸಮೀಕ್ಷೆಗೂ ವ್ಯತ್ಯಾಸಗಳಿವೆ. ಹೊಸ 1561 ಪಟ್ಟಿಯಲ್ಲಿ ಎಲ್ಲವನ್ನೂ ಪ್ರತ್ಯೇಕ ಜಾತಿ ಮಾಡಲಾಗಿದೆ. ಉಪ ಜಾತಿಗಳನ್ನೇ ಮುಖ್ಯ ಜಾತಿ ಎಂದು ಅವೈಜ್ಞಾನಿಕವಾಗಿ ಪರಿಗಣಿಸಲಾಗಿದೆ. 450 ಕೋಟಿ ರೂ ವೆಚ್ಚ ಮಾಡಿ ಮುಖ್ಯ ಜಾತಿಯನ್ನೇ ತಿಳಿಸಿಲ್ಲ. ಒಕ್ಕಲಿಗ ಮುಖ್ಯ ಜಾತಿಯಾಗಿ ಉಪ ಜಾತಿ ಬೇರೆ ಇದ್ದರೆ ಹೇಗೆ ನಮೂದಿಸುವುದು ಎಂದು ವಾದಿಸಿದರು.
ಒಂದು ಜಾತಿಗೆ ಮಾತ್ರ ಲಾಗಿನ್ ಅವಕಾಶವಿದೆ. 2002ರ ಅಧಿಸೂಚನೆಯಲ್ಲಿ 800 ಜಾತಿಯಿದ್ದರೇ, ಈಗ 1561 ಜಾತಿ ಮಾಡಿದ್ದಾರೆ ಎಂಬುದಾಗಿ ವಾದಿಸಿದರು.
ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಎಂ ಚಂದ್ರಶೇಖರ್ ವಾದಿಸಿ, ಆಧಾರ್ ಸಂಗ್ರಹದಿಂದ ಮಾಹಿತಿ ಪಡೆಯಲು ಅನುಮತಿ ಬೇಕು. ಖಾಸಗಿ ತನದ ಹಕ್ಕಿನ ಪ್ರಶ್ನೆಯಿರುವುದರಿಂದ ತಡೆ ನೀಡಲು ಹೈಕೋರ್ಟ್ ನ್ಯಾಯಪೀಠವನ್ನು ಮನವಿ ಮಾಡಿದರು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಶ್ರೀರಂಗ ವಾದಿಸಿ ತರಾತುರಿಯಲ್ಲಿ 17 ದಿನಗಳಲ್ಲೇ ಆತುರದ ಸರ್ವೆ ನಡೆಸುತ್ತಿದ್ದಾರೆ. ಮೊದಲಿಗೆ 1400 ಜಾತಿ ಎಂದು ವಾರದ ಬಳಿಕ 1561 ಜಾತಿ ನಮೂದಿಸಿದೆ. ಈ ರೀತಿ ದಿಢೀರ್ ಜಾತಿ ಹೆಚ್ಚಳಕ್ಕೆ ಸಮರ್ಥನೆ ನೀಡಿಲ್ಲ ಎಂಬುದಾಗಿ ಹೇಳುವ ಮೂಲಕ ಅರ್ಜಿದಾರರ ಪರ ವಾದವನ್ನು ಅಂತ್ಯಗೊಳಿಸಿದರು.
ರಾಜ್ಯ ಸರ್ಕಾದ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸುತ್ತಾ ಮೊದಲಿಗೆ ಇದು ಜಾತಿಗಣತಿಯಲ್ಲ ಎಂದು ಹೇಳಬಯಸುತ್ತೇನೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೆ. ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆಯಾಗಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. 20 ಡಿಗ್ರಿ ಆಕಡೆ ಇದೆ. 30 ಡಿಗ್ರಿ ಈ ಕಡೆ ಇದೆ ಎನ್ನುವಂತಿಲ್ಲ. ಈ ಆಧಾರದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬಾರದೆಂದು ಎಂದು ವಾದಿಸಿದರು.
ಈಗ ತಡೆಯಾಜ್ಞೆ ನೀಡಿದರೇ ದೂರಗಾಮಿ ಪರಿಣಾಮವಾಗಲಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡುವುದಿಲ್ಲ. ಅಂಕಿ ಅಂಶ ಸಂಗ್ರಹಿಸುವುದಷ್ಟೇ ಸರ್ವೆ ಉದ್ದೇಶವಾಗಿದೆ ಎಂದು ವಾದಿಸಿದರು.
ಈ ವೇಳೆ ಗಣತಿಗೂ ಸರ್ವೆಗೂ ವ್ಯತ್ಯಾಸ ಏನಿದೆ. ರಾಜ್ಯ ಸರ್ಕಾರಕ್ಕೆ ಸರ್ವೆ ಮಾಡಲು ಅಧಿಕಾರವಿದೆಯೇ ಎಂಬುದಾಗಿ ಹೈಕೋರ್ಟ್ ನ್ಯಾಯಪೀಠವು ಪ್ರಶ್ನಿಸಿತು. ಅಲ್ಲದೇ 7 ಕೋಟಿ ಜನರನ್ನು ಜಾತಿಯಾಗಿ ಗಣತಿ ಮಾಡಲಾಗುತ್ತಿದೆಯಲ್ಲ ಎಂದಿತು.
ವಾದ-ಪ್ರತಿವಾದವನ್ನು ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು, ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ. ಹೀಗಾಗಿ ಸದ್ಯಕ್ಕೆ ಜಾತಿಗಣತಿ ಮುಂದುವರೆದಂತೆ ಆಗಿದೆ.