ಬೆಂಗಳೂರು: ಪ್ರಮುಖ ಜಪಾನೀ ಮೋಟಾರ್ ಕಂಪೆನಿ ಹೋಂಡಾ ಕರ್ನಾಟಕದಲ್ಲಿ ತನ್ನ ಉತ್ಪಾದನಾ ಹಾದಿಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ್ದು, ರಾಜ್ಯದ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಒಂದು ಹೊಸ ಅಧ್ಯಾಯ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಜಪಾನ್ ಪ್ರವಾಸದ ಸಂದರ್ಭದಲ್ಲಿ ಹೋಂಡಾದ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹಾರಾ ಅವರನ್ನು ಭೇಟಿಯಾಗಿ ಈ ಬಗ್ಗೆ ಮಹತ್ವದ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದ ನರಸಾಪುರ ಟೂ-ವೀಲರ್ ಕಾರ್ಖಾನೆ ಭಾರತದಲ್ಲಿನ ಅವರ ಅತಿದೊಡ್ಡ ಸ್ಥಾವರವಾಗಿದೆ. ಇಲ್ಲಿ ವಾರ್ಷಿಕವಾಗಿ ೨.೪ ದಶಲಕ್ಷ ವಾಹನಗಳನ್ನು ಉತ್ಪಾದಿಸಲಾಗುತ್ತಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ವೇಳೆ ಮಾಡಿಕೊಂಡ ಒಪ್ಪಂದದ (MOU) ಅಡಿಯಲ್ಲಿ ೬೦೦ ಕೋಟಿ ಹೂಡಿಕೆಯೊಂದಿಗೆ ಭಾರತದ ಮೊದಲ ಇಲೆಕ್ಟ್ರಿಕ್ ಟೂ-ವೀಲರ್ ಉತ್ಪಾದನಾ ತಾಣವನ್ನು ಕರ್ನಾಟಕದಲ್ಲಿ ಸ್ಥಾಪಿಸಲಿದೆ ಎಂಬುದು ಸಂತೋಷದ ವಿಷಯ. ದ್ವಿಚಕ್ರ ವಾಹನಗಳ ಕ್ಷೇತ್ರದಾಚೆಗೆ ಹೆಚ್ಚಿನ ಹೂಡಿಕೆಗಳನ್ನು ಪರಿಶೀಲಿಸಲು ಪ್ರೋತ್ಸಾಹಿಸಿದೆವು. ಹೋಂಡಾದ ಕಾರ್ಯಾಚರಣೆ ಮತ್ತು ಭವಿಷ್ಯದ ವಿಸ್ತರಣೆಗಳನ್ನು ಸುಗಮಗೊಳಿಸಲು ಕರ್ನಾಟಕ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದೆ.
ಕರ್ನಾಟಕವನ್ನು ಇಲೆಕ್ಟ್ರಿಕ್ ವಾಹನಗಳು (EV) ಮತ್ತು ಅತ್ಯಾಧುನಿಕ ಸಂಚಾರ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪಿಸುತ್ತಿದ್ದೇವೆ.