ಚಾಮರಾಜನಗರ: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾದ ರಮೇಶ್ ರವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ರವರು ಜೈಹಿಂದ್ ಕಟ್ಟೆಯ ಋಗ್ಬೇದಿ ಕುಟೀರದಲ್ಲಿ ಗೌರವಿಸಿ ಅಭಿನಂದಿಸಿದರು.
ಚಾಮರಾಜನಗರಕ್ಕೆ ಪ್ರಪ್ರಥಮವಾಗಿ ಆಗಮಿಸಿದ್ದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ರಮೇಶ್ ರವರನ್ನು ಗೌರವಿಸಿ ಸುರೇಶ್ ಋಗ್ವೇದಿ ಮಾತನಾಡಿ ಕರ್ನಾಟಕ ಶಿಲ್ಪ ಕಲೆಯ ತವರೂರು ಆಗಿದೆ. ಬೇಲೂರು, ಹಳೇಬೀಡು, ಸೋಮನಾಥಪುರ ಮತ್ತು ಪುರಾತನ ದೇವಾಲಯಗಳಲ್ಲಿ ವಿಶೇಷವಾದ ಶಿಲ್ಪ ಕೌಶಲ್ಯವನ್ನು ಕಾಣಬಹುದು. ಚಾಮರಾಜನಗರ ಜಿಲ್ಲೆಯು ಗಂಗರು, ಹೊಯ್ಸಳರು ವಿಜಯನಗರ ಹಾಗೂ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಹಲವಾರು ದೇವಾಲಯಗಳಲ್ಲಿ ಅದ್ಭುತವಾದ ಶಿಲ್ಪ ಕಲೆಯ ಕೇಂದ್ರಗಳಿವೆ.
ಸರಳ ,ಸಜ್ಜನ ವ್ಯಕ್ತಿಯಾದ ರಮೇಶ್ ರವರು ಅಕಾಡೆಮಿಯ ಕಾರ್ಯ ಯೋಜನೆಯನ್ನು ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ರೂಪಿಸಲಿ. ಜಿಲ್ಲೆಯ ಜನ ಸದಾಕಾಲ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿ ಅವರನ್ನು ಶಾಲು,ಫಲಪುಷ್ಪ ನೀಡಿ ಗೌರವಿಸಲಾಯಿತು.
ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾದ ರಮೇಶ್ ಮಾತನಾಡಿ ಚಾಮರಾಜನಗರ ಜನತೆಯ ಪ್ರೀತಿ ಮರೆಯಲಾಗದು. ಶಿಲ್ಪಕಲಾ ಅಕಾಡೆಮಿಯ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಿ ಮಹಿಳಾ ಸಮಾಜದ ವತ್ಸಲಾ ರಾಜಗೋಪಾಲ್, ಹಿರಿಯ ನಾಗರಿಕರಾದ ರಾಜಗೋಪಾಲ್ ಎನ್, ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ರವಿ ಮಾಲ, ತೇಜ, ಶ್ರಾವ್ಯ ಮುಂತಾದವರು ಉಪಸ್ಥಿತರಿದ್ದರು.