ಮೈಸೂರು : ರೈತರ ಶ್ರಮದ ಬೆವರಿನಿಂದ ನಡೆಯುತ್ತಿರುವ ಹಾಪ್ಕಾಮ್ಸ್ ಮತ್ತು ನಂದಿನಿ ಆರೋಗ್ಯದ ಎರಡು ಕಣ್ಣುಗಳಂತಿದ್ದು, ರಾಜ್ಯದ ದೊಡ್ಡ ದೊಡ್ಡ ಆಸ್ಪತ್ರೆ ಮತ್ತು ಕಾಲೇಜು ಆವರಣಗಳಲ್ಲಿ ಹಾಪ್ಕಾಮ್ಸ್ ಮತ್ತು ನಂದಿನಿ ಪಾರ್ಲರ್ಗಳನ್ನು ತೆರೆಯಬೇಕು ಜನರು ಸಹ ಪ್ರೋತ್ಸಾಹ ನೀಡಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ|| ಸಿ.ಎನ್. ಮಂಜುನಾಥ್ ಕರೆ ನೀಡಿದರು.
ಮೈಸೂರು ಜಯದೇವ ಆಸ್ಪತ್ರೆ ಆವರಣದಲ್ಲಿ ಹಾಪ್ಕಾಮ್ಸ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ವಾಯುಮಾಲಿನ್ಯದಿಂದ ಕಳೆದ ವರ್ಷ ೨೨ ಲಕ್ಷ ಜನ ಸತ್ತಿದ್ದಾರೆ.
ನಾವು ಹಣ್ಣು ತರಕಾರಿ ಧಾನ್ಯಗಳನ್ನು ಬೆಳೆಯಲು ಭೂಮಿಗೆ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಶಧ ಕೆಲವು ಭಾಗದಲ್ಲಿ ಮಾಂಸದ ಮೇಲಿರುವ ಹೆಚ್ಚು ಪ್ರೀತಿ, ಹಣ್ಣು ತರಕಾರಿಗಳ ಮೇಲೆ ಇಲ್ಲವಾಗಿದೆ. ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ಶೆ. ೧೨% ಜನರು ಮಾತ್ರ ತರಕಾರಿ ಹಣ್ಣುಗಳನ್ನು ಸೇವಿಸುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕು. ಭಾರತದೇಶದ ಶೇ. ೭೦% ಜನರಲ್ಲಿ ವಿಟಮಿನ್ ಡಿ ಕೊರತೆ ಇದೆ. ಗ್ರಾಮೀಣ ಭಾಗದ ಶೇ ೫೦% ಜನರಲ್ಲಿ ರಕ್ತಹೀನತೆ ಇದೆ. ಕಡಿಮೆ ಪಾಲೀಶ್ ಮಾಡಿರುವ ಅಕ್ಕಿಯನ್ನು ತಿಂದರೆ ಅದರಲ್ಲಿ ಎಲ್ಲಾ ವಿಟಿಮಿನ್ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು. ಪ್ರತಿವರ್ಷಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಾಗಿರಬೇಕೆಂದು ಸಲಹೆ ನೀಡಿದರು.

ಮೈಸೂರು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಶ್ರೀ ಸೋಮನಾಥ ಸ್ವಾಮಿಜಿ ಮಾತನಾಡಿ ಮೈಸೂರಿಗೆ ಸಾಂಸ್ಕೃತಿಕವಾಗಿ ಅರಮನೆ ಎಷ್ಟು ಪ್ರಾಮುಖ್ಯವೋ ಜಯದೇವ ಆಸ್ಪತ್ರೆ ಕೂಡ ಜನರ ಆರೋಗ್ಯಕ್ಕೆ ಮುಖ್ಯವಾಗಿದೆ ಮಂಜುನಾಥ್ರವರು ಈ ಆಸ್ಪತ್ರೆಯನ್ನು ಅದ್ಭುತವಾಗಿ ನಿರ್ಮಾಣ ಮಾಡಿ ಜನರಿಗೆ ಅನುಕೂಲಮಾಡಿ ಕೊಟ್ಟಿದ್ದಾರೆ ಎಂದರು.
ಸಮಾರಂಭದಲ್ಲಿ ಹಾಪ್ಕಾಮ್ಸ್ನ ಜಿಲ್ಲಾ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ಡಾ|| ಕೆ.ಎಸ್. ಸದಾನಂದ, ಡಾ. ಶಂಕರ್ಶಿರಾ, ಉಪಾಧ್ಯಕ್ಷರಾದ ಸರ್ವೇಶ್, ಸೂರ್ಯಕುಮಾರ್, ನಿರ್ದೇಶಕರುಗಳಾದ ಬೋರೇಗೌಡ, ಹೊಸಹುಂಡಿ ರಘು, ಮಹಾದೇವ, ಶ್ರೀನಿವಾಸ, ಚಂದ್ರೇಗೌಡ, ರಾಮೇಗೌಡ, ಪದ್ಮನಾಭ, ಸುಜಾತ, ನಳಿನಿ, ವ್ಯವಸ್ಥಾಪಕ ನಿರ್ದೇಶಕ ಚೇತನ್, ಜನರಲ್ ಮ್ಯಾನೇಜರ್ ಸುರೇಂದ್ರಕುಮಾರ್, ಲೋಕೇಶ್, ನರ್ಸಿಂಗ್ ಅಧೀಕ್ಷಕ ಹರೀಶ್ಕುಮಾರ್ ಹಾಜರಿದ್ದರು.