ಹುಣಸೂರು: ಹುಣಸೂರು ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ೧೦೦ ಹಾಸಿಗೆ ಸಾಮರ್ಥ್ಯದ ನೂತನ ಸಾರ್ವಜನಿಕ ಆಸ್ಪತ್ರೆ ನಿರ್ಮಾಣದ ಹೆಚ್ಚುವರಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ,ಬಾಕಿ ಇರುವ ೯.೯೫ ಕೋಟಿ ರೂ ಅನುದಾನ ಹಾಗೂ ಇಲಾಖೆಯಿಂದ ಸಲ್ಲಿಸಲಾಗಿರುವ ಪರಿಷ್ಕೃತ ಅಂದಾಜು ಪಟ್ಟಿಯ ಪ್ರಸ್ತಾವನೆಗೆ ಆಡಳಿತಾಕ ಅನುಮೋದನೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಮನವಿ ಪತ್ರ ಸಲ್ಲಿಸಿದರು.
ಮೈಸೂರಿನಲ್ಲಿರುವ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರ ಮನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ ವೇಳೆ ಸಲ್ಲಿಸಿದ ಮನವಿ ಪತ್ರದಲ್ಲಿ ಹುಣಸೂರು ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೨೦೧೭ ರಲ್ಲಿ ಆರ್.ಐ.ಡಿ.ಎಫ್ ನಗಾರ್ಡ್-೨೩ ಯೋಜನೆಯಡಿಯಲ್ಲಿ ರೂ. ೨೫,೦೦ ಕೋಟಿ ರೂ ಯೋಜನಾ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದ್ದು ಈಗಾಗಲೇ ಕಟ್ಟಡ ನಿರ್ಮಾಣ ಮುಕ್ತಾಯಗೊಂಡಿದ್ದು, ಕಟ್ಟಡಕ್ಕೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್, ಒಳವಿನ್ಯಾನ ಕಾಮಗಾರಿಗಳು ಪ್ರಗತಿಯಲ್ಲಿದೆ.
ಸದರಿ ಕಟ್ಟಡದ ನಿರ್ಮಾಣ ಸ್ಥಳ ಬದಲಾವಣೆಯಿಂದ ವಿವ್ಯಾಸದಲ್ಲಿ ಬದಲಾವಣೆಯಾಗಿ ಬೇಸ್ ಮೆಂಟ್ ಫ್ಲೋರ್ ಹೆಚ್ಚುವರಿ ಸೇರ್ಪಡೆಯಾದ ಕಾರಣ ಆಸ್ಪತ್ರೆಯ ಒಟ್ಟಾರೆ ಪರಿಷ್ಕೃತ ಅಂದಾಜು ಮೊತ್ತ ೩೧.೫ ಕೋಟಿ ರೂಗಳಾಗಿದ್ದು ಆಡಳಿತಾತ್ಮಕ ಅನುಮೋದನೆಗೆ ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.
ಸುಸಜ್ಜಿತ ಆಸ್ಪತ್ರೆ ಪ್ರಾರಂಬಿಸಲು ಆಸ್ಪತ್ರೆಯ ಕಟ್ಟಡದಲ್ಲಿ ಉಪಕರಣಗಳು ಸೇರಿದಂತೆ ಹೆಚ್ಚುವರಿ ಅನುಕೂಲತೆಗಳನ್ನು ಒದಗಿಸಬೇಕಿರುವುದನ್ನು ಮನಗಂಡು ೯.೯೫ ಕೋಟಿಗಳ ಅಂದಾಜ ಪಟ್ಟಿಯನ್ನು ಸಿದ್ಧಪಡಿಸಿ, ಆಡಳಿತಾತ್ಮಕ ಮಂಜೂರಾತಿ ಹಾಗೂ ಅನುಧಾನ ಬಿಡುಗಡೆಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆ ಬಾಕಿ ಇರುತ್ತದೆ.
ಹುಣಸೂರು ಉಪವಿಭಾಗೀಯ ಕೇಂದ್ರ ಸ್ಥಾನವಾಗಿರುವುದರಿಂದ ದಿ.ಡಿ.ದೇವರಾಜ ಅರಸು ರವರ ಸ್ಮರಣಾರ್ಥ ಸಾರ್ವಜನಿಕ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಆಸ್ಪತ್ರೆಯನ್ನು ನನ್ನ ಮನವಿ ಮೇರೆಗೆ ೨೦೧೭ ನೇ ಸಾಲಿನಲ್ಲಿ ಅಂದಿನ ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ರವರ ವಿಶೇಷೆ ಕಾಳಜಿಯಿಂದ ಮಂಜೂರು ಮಾಡಿಕೊಟ್ಟಿದ್ದು, ಕಳೆದ ಐದು ವರ್ಷಗಳಲ್ಲಿ ಹೆಚ್ಚುವರಿ ಕಾಮಗಾರಿಗೆ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಆರೋಗ್ಯ ಸಚಿವರಾದ ಡಾ. ಡಿ ಸುಧಾಕರ್ ರವರಲ್ಲಿ ಎಷ್ಟು ಮನವಿ ಮಾಡಿದರೂ ಅನುದಾನ ನೀಡದೆ ತಾರತಮ್ಯ ಮಾಡಿ ಉದ್ದೇಶ ಪೂರ್ವಕವಾಗಿ ತಡೆಹಿಡಿದು ಆಸ್ಪತ್ರೆ ಕಾರ್ಯ ಆರಂಭ ಮಾಡಲು ಅವಕಾಶ ನೀಡಲಿಲ್ಲ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮೂರು ಬಾರಿ ವಿಧಾನಸಭಾ ಅಧಿವೇಶನದಲ್ಲಿ ವಾಗ್ವಾದಕ್ಕಿಳಿದು ಹೋರಾಟ ನಡೆಸಿದೆ. ಆದರೂ ಸಚಿವರು.
ಅನುಮೋದನೆ ನೀಡದೆ ಇರುವುದರಿಂದ ಸಾರ್ವಜನಿಕ ಸೇವೆಗೆ ಸಮರ್ಪಿಸಲು ಸಾಧ್ಯವಾಗಿರುವುದಿಲ್ಲ. ನೂತನ ಆಸ್ಪತ್ರೆಯ ಕಾರ್ಯಚರಣೆ ಪ್ರಾರಂಭಿಸುವುದರಿಂದ ಜಿಲ್ಲಾ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಆಗುತ್ತದಲ್ಲದೆ ಮೂರು ತಾಲ್ಲೂಕುಗಳ ಜನರಿಗೆ ಅನುಕೂಲವಾಗಲಿದೆ.