ಮಂಡ್ಯ: ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯುತ್ತಿರುವ ಯುವಜನೋತ್ಸವದಲ್ಲಿ ಯುವ ಪ್ರಶಸ್ತಿ ಪುರಸ್ಕೃತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಮಂಡ್ಯ ಜಿಲ್ಲಾ ಯುವ ಪರಿಷತ್ ಸದಸ್ಯರು ಯುವ ಜನೋತ್ಸವಕ್ಕೆ ಅಡ್ಡಿಪಡಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಯುವ ಪರಿಷತ್ ಸದಸ್ಯರು ಯುವ ಜನೋತ್ಸವ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಮಂಡ್ಯದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಹೈಡ್ರಾಮ ಸೃಷ್ಟಿಯಾಗಿದ್ದು, ಕಾರ್ಯಕ್ರಮ ವೇದಿಕೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.
ಏಕಪಕ್ಷೀಯವಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಿಡಿ ಓಂಪ್ರಕಾಶ್ ನಿರ್ಧಾರ ಮಾಡಿದ್ದಾರೆ. ಸಂಘ ಸಂಸ್ಥೆಗಳ ಸಹಮತ ಕೇಳದ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಯುವಜನೋತ್ಸವಕ್ಕಾಗಿ 5 ಲಕ್ಷ ಹಣ ಬಿಡುಗಡೆಯಾಗಿದೆ. ಹೀಗಿದ್ದರೂ ಸರಿಯಾದ ರೀತಿ ಕಾರ್ಯಕ್ರಮ ರೂಪುರೇಶೆ ಆಗಿಲ್ಲ ಎಂದು ಒಂದು ಗುಂಪು ಆಪಾದಿಸಿದೆ. ಮಾತ್ರವಲ್ಲದೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಓಂ.ಪ್ರಕಾಶ್ ಅವರನ್ನು ಅಮಾನತ್ತುಗೊಳಿಸಲು ಒತ್ತಾಯಿಸಿದ್ದಾರೆ.

ಇನ್ನೊಂದು ಗುಂಪು ಅಧಿಕಾರಿ ಪರ ಬ್ಯಾಟಿಂಗ್ ಮಾಡಿದ್ದು, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ಮಧ್ಯ ಪ್ರವೇಶಿಸಿದ ಪೋಲೀಸರು ಕಾರ್ಯಕ್ರಮ ಅಡ್ಡಿ ಪಡಿಸಲು ಮುಂದಾದ ಪ್ರತಿಭಾಟನಕಾರರನ್ನು ಪೊಲೀಸರು ತಡೆದಿದ್ದಾರೆ.
ಜಿಲ್ಲಾಡಳಿತ, ಜಿ.ಪಂ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಗಣಿಗ ರವಿಕುಮಾರ್ ಉದ್ಘಾಟಿಸಿದ್ದಾರೆ. ಬಳಿಕ ಸ್ಥಳದಿಂದ ಹೊರಟಿದ್ದಾರೆ.
ಶಾಸಕ ಗಣಿಗ ರವಿ ಕೂಡ ಡಿಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.23 ಕ್ಕೆ ಸಭೆ ಕರೆದು ಕಾರ್ಯಕ್ರಮ ಆಯೋಜನೆ ಬಗ್ಗೆ ನಿರ್ಧಾರ ಮಾಡಲಾಗುವುದು. ಎಲ್ಲರು ಒಟ್ಟಾಗಿ ಯುವ ಜನೋತ್ಸವ ಮಾಡೋಣ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.