ತುಮಕೂರು: ಹೇರೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀಧರ್, ತಾನು ಸೋತಿದಕ್ಕೆ ಇತರ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸುವ ಮೂಲಕ ಹೈಡ್ರಾಮ ಸೃಷ್ಠಿಸಿದ್ದಾರೆ.
13 ಸದಸ್ಯರ ಬಲ ಇರುವ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಗೆಲುವಿಗೆ 7 ಮತಗಳ ಅವಶ್ಯಕತೆ ಇತ್ತು. ತಾನು ಸೇರಿದಂತೆ ಒಟ್ಟು 7 ಸದಸ್ಯರಿಗೆ ಆಮಿಷವೊಡ್ಡಿ ಪ್ರವಾಸಕ್ಕೆ ಕರೆದುಕೊಂಡಿದ್ದ ಶ್ರೀಧರ್, ವಿವಿಧ ಯಾತ್ರಾ ಸ್ಥಳ, ಪ್ರವಾಸಿ ತಾಣ ಸುತ್ತಿಸಿದ್ದ. ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದ. ಪ್ರವಾಸಕ್ಕೆ ಹೋದವರೆಲ್ಲರೂ ಮತ ಹಾಕಿದ್ದರೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀಧರ್ ಗೆದ್ದು ಅಧ್ಯಕ್ಷನಾಗಬೇಕಿತ್ತು.
ಆದರೆ ಒಬ್ಬರು ಅಡ್ಡ ಮತದಾನ ಮಾಡಿದ್ದರಿಂದ ಶ್ರೀಧರ್ ಸೋತು, ಅಧ್ಯಕ್ಷರಾಗಿ ಜೆಡಿಎಸ್ ನ ನಾಗರಾಜು ಆಯ್ಕೆಯಾಗಿದ್ದಾರೆ.
ಇದರಿಂದ ಆಕ್ರೋಶಗೊಂಡ ಶ್ರೀಧರ್, ತಾನು ಪ್ರವಾಸಕ್ಕೆ ಕರೆದುಕೊಂಡು ಹೋದ 6 ಜನ ಸದಸ್ಯರಿಂದಲೂ ಹೆಬ್ಬೂರಿನ ಚಿಕ್ಕಣ್ಣ ಸ್ವಾಮಿ ದೇವಸ್ಥಾನದಲ್ಲಿ ಕರ್ಪೂರ ಹಚ್ಚಿ, ಆಣೆ ಪ್ರಮಾಣ ಮಾಡಿಸಿದ್ದಾರೆ. ನನಗೆ ಮೋಸ ಮಾಡಿದವರ ಕುಟುಂಬ ಸರ್ವನಾಶ ಆಗಲಿ ಎಂದು ಕರ್ಪೂರ ಹಚ್ಚಿ ಪ್ರಾರ್ಥನೆ ಮಾಡಿದ್ದಾರೆ.