ಪಿರಿಯಾಪಟ್ಟಣ : ನಾನು ರಾಜಕೀಯದ ಕೊನೆಯ ಹಂತದಲ್ಲಿದ್ದೇನೆ. ನನ್ನ ಪರವಾಗಿ ಬರುವವರಿಗೆ ನಿಮ್ಮ ಸಹಕಾರ ಇರಲಿ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದ್ದು, ಈ ಬಗ್ಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ತಾಲೂಕಿನಲ್ಲಿ ಪ್ರತಿ ಸಮುದಾಯವು ರಾಜಕೀಯ ಶಕ್ತಿ ತುಂಬಿ ತಾಲೂಕಿನ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಇದನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಮುಂದುವರೆದು, ಅಧಿಕಾರ ನೀಡಿದ ಸಂದರ್ಭದಲ್ಲೆಲ್ಲಾ ತಾಲೂಕಿನ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನಾನು ಇಂದು ರಾಜಕೀಯದ ಕೊನೆಯ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ನನ್ನ ಪರವಾಗಿ ಬರುವ ವ್ಯಕ್ತಿಗಳಿಗೆ ತಾಲೂಕಿನ ಜನ ರಾಜಕೀಯ ಸಹಕಾರ ನೀಡಬೇಕು ಎಂದರು.
ಇನ್ನೂ ಅಧಿಕಾರಕ್ಕೆ ಬಂದ ದಿನದಿಂದಲೂ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಶಾಶ್ವತಗೊಳಿಸಿದ್ದೇನೆ. ರೈತರ, ಕಾರ್ಮಿಕರ ಮತ್ತು ಗ್ರಾಮಗಳ ಅಭಿವೃದ್ಧಿಗೆ ನೀಡಿರುವ ಯೋಜನೆಗಳು ಇಂದಿಗೂ ಅಜರಾಮರವಾಗಿವೆ. ಇವುಗಳನ್ನು ಎಂದಿಗೂ ತಾಲೂಕಿನ ಜನ ಮರೆಯಬಾರದು ಎಂದರು.
ಇದೇ ವೇಳೆ ಪಿರಿಯಾಪಟ್ಟಣ ತಾಲೂಕಿನ ನಂದಿಪುರ ಗ್ರಾಮದಲ್ಲಿ ಬೆಟ್ಟದಪುರ-ರಾವಂದೂರು ಮುಖ್ಯ ರಸ್ತೆಯಿಂದ ನಂದಿಪುರ ಗ್ರಾಮಕ್ಕೆ ಬರುವ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಮರದೂರು, ವಡ್ಡರಹಳ್ಳಿ ಕೊಪ್ಪಲು, ನಂದಿಪುರ, ಅಬ್ಬಳತಿ, ಮಾಲಂಗಿ, ಬೆಟ್ಟದ ತುಂಗ, ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಬೆಟ್ಟದಪುರ ರಾಗಿ ಮಾರಾಟ ನೋಂದಣಿ ಕೇಂದ್ರ ಉದ್ಘಾಟಿಸಿದರು.
ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುನೀಲ್ ಕುಮಾರ್, ಎಂಜಿನಿಯರ್ಗಳಾದ ಮಂಜುನಾಥ್, ಚಂದ್ರಶೇಖರ, ಮೋಹನ್, ಮಹೇಶ್, ಉದಯ, ಮಲ್ಲಿಕಾರ್ಜುನ, ಕೃಷ್ಣಮೂರ್ತಿ, ಸುಗಂದ್ ರಾಜ್, ಲವ, ಪಶು ಇಲಾಖೆ ಸೋಮಯ್ಯ, ಅರಣ್ಯ ಇಲಾಖೆ ಪದ್ಮಶ್ರೀ, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ದರ್ಶನ್, ಅಬಕಾರಿ ಇಲಾಖೆ ವೆಂಕಟೇಶ್, ಮುಖಂಡರಾದ ಡಿ.ಟಿ.ಸ್ವಾಮಿ, ಹೊಲದಪ್ಪ, ಮಾದೇಗೌಡ, ಸಣ್ಣಸ್ವಾಮಿ ಗೌಡ, ಪುಟ್ಟಮಾದೇಗೌಡ, ರಮೇಶ್, ವಿ.ಎಸ್.ಕುಮಾರ್ ಇತರರಿದ್ದರು.



