ಬೆಂಗಳೂರು: ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೆ ಏನೂ ಲಾಭ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಹೇಳಿದ್ದೇನೆ. ಆದರೆ ಸರ್ಕಾರದ ನಡೆ ರೈತರನ್ನು, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಆರ್.ಟಿ.ನಗರಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಬಿಡುಗಡೆ ಆದೇಶ ಹಿನ್ನೆಲೆಯಲ್ಲಿ ಸಂಸದರ ನಿಯೋಗ ಹೋಗಲು ಏನೂ ಸಮಸ್ಯೆ ಇಲ್ಲ, ಆದರೆ ಸರ್ಕಾರದ ನಡೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರ ತಾನು ಸಲ್ಲಿಸಿರುವ ಅಫಿಡವಿಟ್ ಗೆ ಬದ್ಧರಾಗಿರಬೇಕಲ್ವಾ ಈಗ ಅಫಿಡವಿಟ್ ನಂತರವೂ ನೀರು ಬಿಡುವುದಕ್ಕೆ ಹೋದರೆ ಸರ್ಕಾರ ಸುಳ್ಳು ಹೇಳಿದ ಹಾಗೇ ಆಗುತ್ತದೆ. ಸರ್ಕಾರದ ಪ್ರತಿಯೊಂದು ನಡೆ ರೈತರನ್ನು, ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ ಎಂದರು.
ನಮ್ಮ ಕಾಲದಲ್ಲಿ ಯಾವುದೇ ಇಕ್ಕಟ್ಟು, ಬಿಕ್ಕಟ್ಟು ಇರಲಿಲ್ಲ. ನಮ್ಮ ಸಲಹೆಯನ್ನು ತೆಗೆದುಕೊಳ್ಳದೇ ಇದ್ದರೆ ಏನು ಮಾಡಲು ಆಗುತ್ತದೆ. ಕೋರ್ಟ್ನಿಂದ ಹೊರಗೆ ಬಗೆಹರಿಸಿಕೊಳ್ಳಲು ರಾಜ್ಯಸಭೆಯಲ್ಲಿ ದೇವೇಗೌಡರು ಸಲಹೆ ನೀಡಿದ್ದಾರೆ. ಆದರೆ ನಾಲ್ಕು ರಾಜ್ಯಗಳು ಒಪ್ಪಿಕೊಂಡಾಗ ಮಾತ್ರ ಅದು ಸಾಧ್ಯ. ತಮಿಳುನಾಡಿನವರು ೩೫ ವರ್ಷಗಳಿಂದ ಇದೇ ವಾದ ಮಾಡುತ್ತಿದ್ದಾರೆ.
ಮಹಿಳಾ ಮೀಸಲಾತಿ ಒಂದು ಕ್ರಾಂತಿಕಾರಿ ನಿರ್ಣಯ. ೨೦೦೯ರಲ್ಲಿ ಯುಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಿತ್ತು. ಆದರೆ ಲೋಕಸಭೆಯಲ್ಲಿ ಯುಪಿಎ ಸದಸ್ಯ ಪಕ್ಷಗಳೇ ಒಪ್ಪಿರಲಿಲ್ಲ. ಶೇ ೫೦%ರಷ್ಟಿರುವ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗುತ್ತಿರುವುದು ಒಂದು ಕ್ರಾಂತಿಕಾರಕ ನಡೆ. ಕೇವಲ ಪ್ರಪೋಸಲ್ ಸಿದ್ಧಪಡಿಸುವುದು ಮಾತ್ರವಲ್ಲ, ಎಲ್ಲ ಪಕ್ಷಗಳನ್ನು ಒಪ್ಪಿಸಿ ಬಿಲ್ ಪಾಸ್ ಮಾಡುವುದು ಮುಖ್ಯ. ಕೇಂದ್ರ ಸರ್ಕಾರದವರು ಈ ಬಿಲ್ ಅನ್ನು ಒಪ್ಪಿಗೆ ಪಡೆದು ಕಾಯ್ದೆಯಾಗಿ ಜಾರಿಗೆ ತರುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.