ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಜೆಡಿಎಸ್ನಲ್ಲಿ ಯಾರೂ ಉಳಿಯಲ್ಲ. ಐದು ತಿಂಗಳು ಸಮಯ ಕೊಡುತ್ತೇನೆ ೫೦ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ. ಮಾತ್ತೆತ್ತಿದರೆ ರಾಜ್ಯ ಬಿಜೆಪಿಯವರು ವರಿಷ್ಠರ ಅಂತ ಹೇಳುತ್ತಾರೆ. ಯಾಕೆ ರಾಜ್ಯ ಬಿಜೆಪಿ ನಾಯಕರಿಗೆ ಬೆಲೆ ಇಲ್ವಾ. ಬಿಜೆಪಿಯ ಐವತ್ತು ಜನರು ನಮ್ಮ ಪಕ್ಷಕ್ಕೆ ಬರುವುದಕ್ಕೆ ತಯಾರಿದ್ದಾರೆ ನೆನಪಿಡಿ. ಎಲ್ಲಾ ಸಮಸ್ಯೆ ಸರಿಮಾಡಿಕೊಂಡು ಬೆಳಗಾವಿ ಅಧಿವೇಶನಕ್ಕೆ ಬರಲಿ ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಲಸ ಮಾಡದೆ ಕಲಬುರಗಿ ಜನರು ಸುಮ್ಮನೇ ಗೆಲ್ಲಿಸಿ ಕಳಿಸುತ್ತಾರಾ? ಏನು ಮಾಡಿದ್ದೀನಿ ಅಂತಾ ತಿಳಿಯಬೇಕಿದ್ದರೇ ಹೆಚ್?ಡಿ ಕುಮಾರಸ್ವಾಮಿ ಅವರನ್ನು ಸ್ಥಳಕ್ಕೆ ಕರೆದೊಯ್ಯುವೆ. ಇವರು ಏನು ಮಾಡಿದ್ದಾರೆ ಅಂತಾ ತಿಳಿದು ಜನರು ದೂರ ಇಟ್ಟಿದ್ದಾರೆ. ಪದೇ ಪದೇ ಕಲಬುರಗಿ ಜನ ಯಾಕೆ ಆರಿಸಿ ಕಳಿಸಿದ್ದಾರೆ? ಕೆಲಸ ಮಾಡದೇ ಜನ ಸುಮ್ಮನೆ ಆರಿಸುತ್ತಾರಾ? ಜೆಡಿಎಸ್ ನವರಿಗೆ ಕೇಳಿ ಜನರು ನಮಗೆ ಓಟು ಹಾಕುತ್ತಾರಾ ಎಂದು ವಾಗ್ದಾಳಿ ಮಾಡಿದರು.
ನಮಗೆ ಅವರ ಅವಶ್ಯಕತೆ ಇಲ್ಲ. ಅವರ ಅಸ್ತಿತ್ವಕ್ಕೆ ಏನು ಬೇಕಾದರೂ ಹೇಳಿಕೊಳ್ಳಲಿ. ಜೆಡಿಎಸ್ ಬಳಿ ಯಾವುದೇ ಇಶ್ಯೂ ಇಲ್ಲ. ಅವರು ಮೊದಲು ಭ್ರಷ್ಟಾಚಾರ ವಿಚಾರ ಮಾತನಾಡಿದರು. ಅವರ ಪೆನ್ ಡ್ರೈವ್ ಅವರ ಜೇಬಿನಲ್ಲೇ ಉಳಿಯಿತು. ಅವರ ಮನೆ ಗೊಂದಲಗಳನ್ನು ಮೊದಲು ನಿವಾರಿಸಿಕೊಳ್ಳಲಿ ಎಂದರು.
ಬಿಜೆಪಿಯವರಿಗೆ ಮನವಿ ಮಾಡಿಕೊಳ್ಳುತ್ತೇನೆ ಬರ ಅಧ್ಯಯನ ಮುಗಿದಿದೆ. ಕೇಂದ್ರದ ತಂಡವೇ ಬರ ಪರಿಶೀಲನೆ ಮಾಡಿ ವರದಿ ಕೂಡ ಕೊಟ್ಟಿದೆ. ಕೇಂದ್ರ, ರಾಜ್ಯ ತಂಡಗಳ ಅಧ್ಯಯನ ಮುಗಿದ ಮೇಲೆ ನೀವೇನು ಅಧ್ಯಯನ ಮಾಡುವುದು? ಕಾಂಗ್ರೆಸ್ಗೆ ಏರು ಧ್ವನಿಯಲ್ಲಿ ಗದರಿಸುತ್ತೀರಲ್ಲ, ಅದೇ ಧ್ವನಿಯನ್ನು ಕೇಂದ್ರದ ಮುಂದೆ ಎತ್ತಿ. ಇಲ್ಲಿ ಬರ ಅಧ್ಯಯನ ಮಾಡೋದು ಬಿಟ್ಟು ೧೭ ಸಾವಿರ ಕೋಟಿ ರೂ. ಪರಿಹಾರ ತನ್ನಿ. ಕೇವಲ ಗಿಮಿಕ್ ಮಾಡೋದು ಬಿಡಿ ಎಂದು ಹೇಳಿದರು.