Tuesday, February 3, 2026
Google search engine

Homeರಾಜಕೀಯಸಿದ್ದರಾಮಯ್ಯನವರ ಹೇಳಿಕೆಗೆ ನಾನು ಉತ್ತರವನ್ನು ಕೊಡುತ್ತೇನೆ: ನಳಿನ್‌ಕುಮಾರ್ ಹೀಗೆ ಹೇಳಿದ್ಯಾಕೆ?

ಸಿದ್ದರಾಮಯ್ಯನವರ ಹೇಳಿಕೆಗೆ ನಾನು ಉತ್ತರವನ್ನು ಕೊಡುತ್ತೇನೆ: ನಳಿನ್‌ಕುಮಾರ್ ಹೀಗೆ ಹೇಳಿದ್ಯಾಕೆ?

ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ,
ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ. ಆದರೆ ನಮ್ಮ ರಾಜ್ಯಕ್ಕೆ ಕೇಂದ್ರ ಬಜೆಟಿನಲ್ಲಿ ಏನೂ ಸಿಗಲಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ನಾನು ಉತ್ತರವನ್ನು ಕೊಡುತ್ತೇನೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ ಕೃಷಿ, ರೈಲ್ವೆ, ಮೀನುಗಾರಿಕೆ, ಮಹಿಳಾ ಸ್ವಸಹಾಯ ಸಂಘ, ಕೌಡ್ ಸೆಂಟರ್ ಸ್ಥಾಪನೆ, ಜಲಸಾರಿಗೆ ಸಹಿತ ವಿವಿಧ ಕ್ಷೇತ್ರಗಳಿಗೆ ಕೇಂದ್ರದ ಬಜೆಟಿನಿಂದ ಹಲವು ಪ್ರಯೋಜನಗಳಿವೆ . ಇದು ರಾಜ್ಯದ ನಾಯಕರಿಗೆ ಕಾಣುವುದಿಲ್ಲ ಎಂದರು. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪ್ರಮುಖ ನಗರಗಳ ಅಭಿವೃದ್ಧಿಗಾಗಿ ನಗರ ಆರ್ಥಿಕ ವಲಯ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಲ್ಲಿ ಬೆಂಗಳೂರನ್ನು ಕೂಡ ಸೇರಿಸಲಾಗಿದೆ. ಇದಕ್ಕಾಗಿ ಐದು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂಪಾಯಿಗಳನ್ನು ಬೆಂಗಳೂರಿಗೆ ನೀಡಲಾಗುತ್ತಿದೆ ಎಂದರು.
ಕೇಂದ್ರ ಬಜೆಟ್ 2026-27 ರಲ್ಲಿ ಮೀನುಗಾರಿಕಾ ಕ್ಷೇತ್ರಕ್ಕೆ ಇದುವರೆಗಿನ ಅತ್ಯಧಿಕ ವಾರ್ಷಿಕ ಅನುದಾನವಾಗಿ 2,761.80 ಕೋಟಿ ಮೀಸಲಿಡಲಾಗಿದೆ. ಇದರಿಂದ ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಯನ್ನು ಬಲಪಡಿಸುವುದು, ರಫ್ತು ಹೆಚ್ಚಿಸುವುದು ಮತ್ತು ಮೀನುಗಾರರು ಹಾಗೂ ಮೀನು ಸಾಕಾಣಿಕೆದಾರರ ಜೀವನೋಪಾಯವನ್ನು ಸುಧಾರಿಸುವುದರ ಮೇಲೆ ಸರಕಾರದ ಒತ್ತಾಸ ಸ್ಪಷ್ಟವಾಗಿದೆ. ಒಟ್ಟು ಅನುದಾನದಲ್ಲಿ 2,530 ಕೋಟಿ ರೂಪಾಯಿ ಯೋಜನಾ ಆಧಾರಿತ ಕ್ರಮಗಳಿಗೆ ಮೀಸಲಾಗಿದ್ದು, ಪ್ರಧಾನ ಮಂತ್ರಿ ಮತ್ಸಸಂಪದಾ ಯೋಜನೆಯಿಂದ 2026-27ಕ್ಕೆ 2500 ಕೋಟಿ ರೂ ಅನುದಾನವನ್ನು ಪಡೆದಿದೆ. ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕಾ ಮೌಲ್ಯ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ 500 ಜಲಾಶಯಗಳು ಮತ್ತು ಅಮೃತ್ ಸರೋವರಗಳ ಏಕೀಕೃತ ಅಭಿವೃದ್ಧಿಗೆ ಹಾಕಿರುವ ಯೋಜನೆಯಡಿಯಲ್ಲಿ ಸ್ಪಾರ್ಟ್ ಅಪ್ ಗಳು, ಮಹಿಳಾ ನೇತೃತ್ವದ ಗುಂಪುಗಳು ಹಾಗೂ ಮೀನುಗಾರರ ಉತ್ಪಾದಕ ಸಂಸ್ಥೆಗಳು ಭಾಗವಹಿಸುವ ಮೂಲಕ ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು .
ಬೆಂಗಳೂರಿನಿಂದ ಹೈದ್ರಾಬಾದಿಗೆ ಹಾಗೂ ಬೆಂಗಳೂರಿನಿಂದ ಚೆನ್ನೈಗೆ ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಇದರಿಂದ ವ್ಯಾಪಾರ, ವ್ಯವಹಾರ ಅಭಿವೃದ್ಧಿ ಕಾಣಲಿವೆ. ಇನ್ನು ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 2026-27 ನೇ ಸಾಲಿನಲ್ಲಿ ವಿಶೇಷ 500 ಕೋಟಿ ರೂಪಾಯಿಗಳನ್ನು ಕೂಡ ಮೀಸಲಿಡಲಾಗಿದೆ. ಕಳೆದ ಬಾರಿ 350 ಕೋಟಿ ರೂಪಾಯಿ ನೀಡಲಾಗಿತ್ತು. ರಾಜ್ಯದ ರೈಲ್ವೆ ಯೋಜನೆಗಳಿಗೆ 7748 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ರೈಲು ಮಾರ್ಗ ನಿರ್ಮಾಣ, ಜೋಡಿ ಹಳಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಲಾಗಿದೆ ಎಂದರು
ಅಲ್ಲದೇ ತೆಂಗಿನ ಕಾಯಿ, ಕೋಕೋ ಬೆಳೆಗಳಿಗೆ ಆರ್ಥಿಕ ಬೆಂಬಲ ನೀಡುವ ಮೂಲಕ ಕೃಷಿ ಅಭಿವೃದ್ಧಿಗೆ ಉತ್ತೇಜಿಸಿರುವುದು ಕರಾವಳಿ ಭಾಗದ ಕೃಷಿಕರಿಗೆ ವರದಾನವಾಗಲಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಆಮೆ ಹಾದಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ಘೋಷಿಸಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಬಡವರ, ಮಧ್ಯಮ ವರ್ಗದವರ, ಮಹಿಳೆಯರ , ಯುವಕರ ಹಿತ ಕಾಯುವ ಸರ್ವ ಸ್ಪರ್ಶಿ ಬಜೆಟ್ ಇದಾಗಿದೆ . ರಾಜ್ಯ ಮತ್ತು ದೇಶದ ವಿಕಸಿತಕ್ಕೆ ಈ ಬಜೆಟ್ ಕೊಡುಗೆಯನ್ನು ನೀಡಲಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ವಸಂತ ಪೂಜಾರಿ, ಪ್ರೇಮಾನಂದ ಶೆಟ್ಟಿ ಸಹಿತ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular