ಬೆಂಗಳೂರು : ಕರಾವಳಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಆರ್ಥಿಕ ಉತ್ಪಾದನೆ (ಜಿಡಿಪಿ) ಸುಮಾರು ಶೇ.2ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ಕರಾವಳಿ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳ ಹೂಡಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಜಿಡಿಪಿ ಸುಮಾರು 39.9 ಶೇಕಡಾ ಇದ್ದರೆ, ದಕ್ಷಿಣ ಕನ್ನಡದ ಜಿಡಿಪಿ ಕೇವಲ 5.4 ಶೇಕಡಾ ಮಾತ್ರ ಇದೆ. ಎರಡರ ನಡುವಿನ ಅಂತರ ಬಹಳ ದೊಡ್ಡದಾಗಿದ್ದು, ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸಿದರೆ ದಕ್ಷಿಣ ಕನ್ನಡದ ಜಿಡಿಪಿ ಮುಂದಿನ ಎರಡು ವರ್ಷಗಳಲ್ಲಿ 2 ಶೇಕಡಾ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 2,129 ಸ್ಟಾರ್ಟ್ಅಪ್ಗಳು/ಕಂಪನಿಗಳು ಸ್ಥಾಪನೆಯಾಗಿ ಸುಮಾರು 2.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಐದು ಒಪ್ಪಂದಗಳು, ತಂತ್ರಜ್ಞಾನ ಕ್ಷೇತ್ರದಲ್ಲಿ 13 ಒಪ್ಪಂದಗಳು ಹಾಗೂ 475 ಸ್ಟಾರ್ಟ್ಅಪ್ ಸಂಸ್ಥೆಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಇದೇ ಅವಧಿಯಲ್ಲಿ 60 ನವೋದ್ಯಮಿಗಳೊಂದಿಗೆ ತ್ರಿಪಕ್ಷೀಯ ಒಪ್ಪಂದಗಳು, ನಾಲ್ಕು ಮಹಿಳಾ ಉದ್ಯಮಿಗಳ ಗುಂಪುಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳು ಹಾಗೂ 27 ಸ್ಟಾರ್ಟ್ಅಪ್ ಸಂಸ್ಥೆಗಳೊಂದಿಗೆ ಸಹಕಾರ ಒಪ್ಪಂದಗಳನ್ನು ಸರ್ಕಾರ ಮಾಡಿಕೊಂಡಿದೆ ಎಂದು ತಿಳಿಸಿದರು.
ಇನ್ನೂ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಾಜ್ಯದ ಸಾಫ್ಟ್ವೇರ್ ರಫ್ತು 2022–23ರಲ್ಲಿ ರೂ3.55 ಲಕ್ಷ ಕೋಟಿ, 2023–24ರಲ್ಲಿ ರೂ.4.09 ಲಕ್ಷ ಕೋಟಿ ಹಾಗೂ 2024–25ರಲ್ಲಿ ರೂ.4.58 ಲಕ್ಷ ಕೋಟಿ ದಾಖಲಾಗಿದೆ. ಮೂರು ವರ್ಷಗಳಲ್ಲಿ ಒಟ್ಟು ರೂ.12.22 ಲಕ್ಷ ಕೋಟಿ ರಫ್ತು ನಡೆದಿದೆ. ಈ ಹಣಕಾಸು ವರ್ಷದಲ್ಲಿ ಇದು ರೂ.5.5 ಲಕ್ಷ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಉಡುಪಿ–ಮಂಗಳೂರು–ಮಣಿಪಾಲ ಪ್ರದೇಶವನ್ನು ಸ್ಥಳೀಯ ವೇಗವರ್ಧಕ ಕಾರ್ಯಕ್ರಮದಡಿ ಸೇರಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸ್ಥಳೀಯ ನಿರ್ಮಾಣೋದ್ಯಮಿಗಳ ಸಂಘದ ಸಲಹೆ ಪಡೆದು ರೂಪಿಸಲಾಗಿದೆ. ಅವುಗಳನ್ನು ಸರಳಗೊಳಿಸುವಂತೆ ಮನವಿ ಬಂದಿದ್ದು, ಒಂದು ವಾರದಲ್ಲಿ ಮಾರ್ಗಸೂಚಿಗಳನ್ನು ಸರಳಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.



