ಬನ್ನಿಕುಪ್ಪೆ : ಕಸ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವುದು ಪ್ರಮುಖವಾಗಿದ್ದು, ಅದನ್ನು ಸುಡಬಾರದು ಒಂದು ವೇಳೆ ಸುಟ್ಟರೆ ಕುಡಿಯುವ ನೀರು, ಆಹಾರ ಮಲ್ಲಿನವಾಗುತ್ತದೆ. ಅದರ ಹೊಗೆಯಿಂದ ಕ್ಯಾನ್ಸರ್, ಚರ್ಮರೋಗ ಮತ್ತು ಕಣ್ಣುಗಳಿಗೆ ತೊಂದರೆಯಾಗುವುದು ಖಚಿತ ಎಂದು ಎಸ್ಬಿಎಂ ಸಂಪನ್ಮೂಲ ವ್ಯಕ್ತಿ ಜಗದೀಶ್ ಹೇಳಿದರು.
ಬನ್ನಿಕುಪ್ಪೆ ಗ್ರಾಮ ಪಂಚಾಯತಿ ಅವರಣದಲ್ಲಿ ಆಯೋಜಿಸಿದ್ದ ನನ್ನ ಕಸ ನನ್ನ ಜವಾಬ್ದಾರಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಪ್ಲಾಸ್ಟಿಕ್ ಸುಟ್ಟ ತ್ಯಾಜ್ಯ ನೀರು ಸೇರಿದರೆ ೬೬೦ ಪ್ರಭೇದಗಳ ಜಲಚರಗಳು ಸಾಯುತ್ತವೆ ಅಥವಾ ರೋಗದಿಂದ ನರಳುತ್ತವೆ ಇದಕ್ಕಾಗಿ ಮೊದಲು ನಾವು ಬದಲಾಗಬೇಕು. ಬಳಿಕ ಪರಿಸರ ಬದಲಾಗುತ್ತದೆ. ನನ್ನ ಕಸ ನನ್ನ ಜವಾಬ್ದಾರಿ ಕಾರ್ಯಕ್ರಮ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಎಲ್ಲರೂ ಒಗ್ಗೂಡಿ ಸೌಹಾರ್ದತೆಯಿಂದ ಸ್ವಚ್ಛ ಪರಿಸರ ಉಳಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್. ಗೋವಿಂದ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಾಗನಹಳ್ಳಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಐಟಿಸಿ ಔಟ್ರಿಚ್ ಸಂಸ್ಥೆಯ ಮುಖ್ಯಸ್ಥರು, ಮೈಸೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಸದಸ್ಯರು, ನೀರು ಗಂಟಿಗಳು, ಚಾಲಕರು, ಪೌರಕಾರ್ಮಿಕರು, ಎಂ.ಬಿ.ಕೆ ಮಹಿಳಾ ಒಕ್ಕೂಟದ ಹಾಗೂ ಸ್ವಸಾಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಸ ವಿಲೇವಾರಿ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ. ಅವರು ಮನಸ್ಸು ಮಾಡಿದರೆ ಇಡೀ ಗ್ರಾಮದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಬಹುದು. ಇದಕ್ಕಾಗಿ ನಾವು ಮೊದಲು ಸ್ವಚ್ಛರಾಗಬೇಕು. ಕಡ್ಡಾಯವಾಗಿ ಹಸಿಕಸ ಒಣಕಸಗಳನ್ನು ವಿಂಗಡಣೆ ಮಾಡಿದರೆ, ನಿರ್ವಹಣೆ ಸುಲಭವಾಗುತ್ತದೆ. ಈ ಭೂಮಿಯನ್ನು ಕಾಪಾಡುವ ಹೆಚ್ಚಿನ ಜವಾಬ್ದಾರಿ ಮಹಿಳೆಯರ ಮೇಲಿದೆ.
-ರಾಘವೇಂದ್ರ ಪ್ರಸನ್ನ, ಪಿಡಿಒ