ಬೆಳಗಾವಿ: ಐಪಿಎಲ್ 2025ರ ಕ್ವಾಲಿಫೈಯರ್-1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತಮ್ಮ ಐತಿಹಾಸಿಕ ನಾಲ್ಕನೇ ಫೈನಲ್ ಪ್ರವೇಶಕ್ಕೆ ಯಶಸ್ವಿಯಾಗಿ ಲಗ್ಗೆಯಿಟ್ಟಿದೆ. ಈ ಮಹತ್ವದ ಜಯದಿಂದ ಆರ್ಸಿಬಿ ತಂಡದ ಅಭಿಮಾನಿಗಳಲ್ಲಿ ಹರ್ಷದ ಮೆರವಣಿಗೆ ಎದ್ದು ಕಾಣುತ್ತಿದೆ. ಈ ಹಿನ್ನಲೆಯಲ್ಲಿ, ಗೋಕಾಕದ ಯುವಕ ಶಿವಾನಂದ ಮಲ್ಲನ್ನವರ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಿಶೇಷ ಮನವಿ ಪತ್ರ ಬರೆದಿದ್ದಾರೆ.
ಶಿವಾನಂದ ಅವರು ಸಿಎಂಗೆ ಬರೆದ ಪತ್ರದಲ್ಲಿ, ಈ ಬಾರಿ ಆರ್ಸಿಬಿ ಟ್ರೋಫಿ ಗೆದ್ದರೆ ಆ ದಿನವನ್ನ ‘ಆರ್ಸಿಬಿ ಫ್ಯಾನ್ಸ್ ಹಬ್ಬ’ ದಿನವನ್ನಾಗಿ ಘೋಷಿಸಬೇಕು ಎಂದು ಪ್ರಸ್ತಾಪಿಸಿದ್ದಾರೆ. ಇದಲ್ಲದೆ, ರಾಜ್ಯಾದ್ಯಂತ ಒಂದು ದಿನ ಸಾರ್ವಜನಿಕ ರಜೆ ಘೋಷಿಸಬೇಕೆಂಬ ಮನವಿಯೂ ಅವರು ಸಲ್ಲಿಸಿದ್ದಾರೆ. ಆರ್ಸಿಬಿ ಅಭಿಮಾನಿಗಳ ಸಂತೋಷ, ಒಗ್ಗಟ್ಟು ಮತ್ತು ತುಡಿತವನ್ನು ಗೌರವಿಸುವ ರೀತಿ ಇದಾಗಲಿದೆ ಎಂಬುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಮನವಿ ಪತ್ರ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಲವು ಅಭಿಮಾನಿಗಳು ಈ ಅಭಿಪ್ರಾಯವನ್ನು ಬೆಂಬಲಿಸುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರ್ಸಿಬಿ ತಂಡ ಈ ಹಿಂದೆ 2009, 2011 ಮತ್ತು 2016ರಲ್ಲಿ ಫೈನಲ್ ತಲುಪಿದ್ದರೂ, ಯಾವುದೇ ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. 2025ರಲ್ಲಿ ಕ್ವಾಲಿಫೈಯರ್-1ನಲ್ಲಿ ಗೆದ್ದಿರುವ ಆರ್ಸಿಬಿ, ಈಗಲಾದರೂ ಚಾಂಪಿಯನ್ ಆಗುವ ನಿರೀಕ್ಷೆ ಅಭಿಮಾನಿಗಳಲ್ಲೂ ಮತ್ತು ಕ್ರಿಕೆಟ್ ತಜ್ಞರಲ್ಲಿ ಕೂಡಾ ಹೆಚ್ಚಾಗಿದೆ.
ಅಂತೆಯೇ, ಐಪಿಎಲ್ ಇತಿಹಾಸವನ್ನು ಗಮನಿಸಿದರೆ, ಕಳೆದ 7 ವರ್ಷಗಳಲ್ಲಿ ಕ್ವಾಲಿಫೈಯರ್-1 ಪಂದ್ಯದಲ್ಲಿ ಗೆದ್ದ ತಂಡಗಳೇ ಚಾಂಪಿಯನ್ ಆಗಿರುವ ಸಂದರ್ಭಗಳು ಉಂಟು:
2018 – ಚೆನ್ನೈ ಸೂಪರ್ ಕಿಂಗ್ಸ್
2019, 2020 – ಮುಂಬೈ ಇಂಡಿಯನ್ಸ್
2021 – ಚೆನ್ನೈ ಸೂಪರ್ ಕಿಂಗ್ಸ್
2022 – ಗುಜರಾತ್ ಟೈಟಾನ್ಸ್
2023 – ಚೆನ್ನೈ ಸೂಪರ್ ಕಿಂಗ್ಸ್
2024 – ಕೋಲ್ಕತ್ತ ನೈಟ್ ರೈಡರ್ಸ್
ಈ ಪಟ್ಟಿ ಆರ್ಸಿಬಿಗೆ ಭರವಸೆ ನೀಡುತ್ತಿದೆ. ಕ್ರಿಕೆಟ್ ಪಂಡಿತರು ಆರ್ಸಿಬಿ ಈ ಬಾರಿ ಐಪಿಎಲ್ ಕಪ್ ಮುಡಿಗೇರಿಸಲಿದೆ ಎಂಬ ಭವಿಷ್ಯವಾಣಿ ಮಾಡುತ್ತಿದ್ದಾರೆ.
ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ಟೂರ್ನಿಯ ಅಂತಿಮ ಘಟ್ಟ ತಲುಪಿರುವ ಆರ್ಸಿಬಿ, ತಮ್ಮ ಅಭಿಮಾನಿಗಳ ಭರವಸೆ ಈಡೇರುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.