ಉಡುಪಿ: ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ ಎಂಬ ಸಂದೇಶವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರು ಕಾಡಿನಲ್ಲಿ ಅವಿತಿರುವ ನಕ್ಸಲರಿಗೆ ರವಾನಿಸಿದ್ದಾರೆ.
ಎನ್ಕೌಂಟರ್ ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಭೇಟಿ ನೀಡಿ, ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದರು. ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ. ಶರಣಾಗದಿದ್ದರೆ ಕಾರ್ಯಾಚರಣೆ ಹೊರತು ನಮಗೆ ಬೇರೆ ದಾರಿಯಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಜಿಪಿ ಭೇಟಿ ಬೆನ್ನಲ್ಲೇ ಕೂಂಬಿಂಗ್ ಚುರುಕುಗೊಂಡಿದೆ. ಪೀತಬೈಲ್, ಕಬ್ಬಿನಾಲೆ ಬಚ್ಚಪ್ಪು ಪರಿಸರದಲ್ಲಿ ಓಡಾಟ ನಡೆಸಿ ಎಎನ್ಎಫ್ ಕ್ಯಾಂಪ್ಗೆ ಭೇಟಿಕೊಟ್ಟು ಕೆಲ ಸೂಚನೆ ನೀಡಿರುವ ನೀಡಿದ್ದಾರೆ.
ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಿನಾಲೆ ಅರಣ್ಯ ಪ್ರದೇಶ ವ್ಯಾಪ್ತಿಯ ಪೀತಬೈಲು ಘಟನಾ ಸ್ಥಳದಲ್ಲಿ ದಾಖಲೆ ಸಂಗ್ರಹ ಮಾಡುವ ಸಲುವಾಗಿ ಎಎನ್ಎಫ್ ಬೆಂಗಳೂರಿನಿಂದ ತಜ್ಞ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ಅಧಿಕಾರಿಗಳನ್ನು ಕರೆಸಿಕೊಂಡಿದೆ.
ಪೀತಬೈಲು ಘಟನಾ ಸ್ಥಳದಲ್ಲಿರುವ ಎಲ್ಲಾ ಮಹತ್ವದ ದಾಖಲೆಗಳನ್ನು ಎಫ್ಎಸ್ಎಲ್ ತಂಡ ಪರಿಶೀಲಿಸುತ್ತಿದೆ. ಎನ್ಕೌಂಟರ್ ಪ್ರಕರಣದಲ್ಲಿ ಖಚಿತ ದಾಖಲೆ ಸಂಗ್ರಹ ಮತ್ತು ಸಾಕ್ಷ್ಯಾಧಾರ ಹೋಲಿಕೆಗಾಗಿ ಎರಡು ಬಾರಿ ಎಫ್ಎಸ್ಎಲ್ (FSL) ತಂಡದಿಂದ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ.