ಹುಣಸೂರು: ವಿದ್ಯೆ ಕಲಿಯುವ ದಿಶೆಯಲ್ಲೇ ಗುರುಗಳು ಕಲಿಸುವ ವಿಷಯಗಳನ್ನು ಅರ್ಥ ಮಾಡಿ ಕೊಂಡು ಮುನ್ನಡೆದರೆ ನಿಮ್ಮ ಭವಿಷ್ಯ ಸಾರ್ಥಕತೆ ಪಡೆದುಕೊಳ್ಳಲಿದೆ ಎಂದು ರೋಟರಿ ಶಾಲಾ ಸಮಿತಿ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಕ್ಕಳಿಗೆ ಕಿವಿ ಮಾತು ಹೇಳಿದರು.
ನಗರದ ಹುಣಸೂರು ರೋಟರಿ ಕ್ಲಬ್ ರೋಟರಿ ಶಾಲೆಯ ಮಕ್ಕಳಿಗೆ ಮಿದುಳು ಚುರುಕು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವು ಕಲಿಯು ಯಾವುದೇ ವಿಷಯದಲ್ಲಿ ಏಕಾಗ್ರತೆ ಮೈಗೂಡಿಸಿಕೊಂಡು ಚಂಚಲತೆಗೆ ಅವಕಾಶ ನೀಡದೆ ಶಿಕ್ಷಕರ ಧ್ವನಿಗೆ, ಪ್ರವಚನಕ್ಕೆ ಕಿವಿ ಕೊಟ್ಟರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದರು.
ನಿಮ್ಮ ಪ್ರೌಢಾವಸ್ಥೆಯಲ್ಲಿ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಸಮಾಜದಲ್ಲಿ ಜರುಗುವ ಬದಲಾವಣೆಗಳ ಅರಿವು ಪಡೆಯದೆ ಸರಿದಾರಿಯಲ್ಲಿ ಸಾಗದೆ ತಪ್ಪು ಹಾದಿ ತುಳಿದರೆ ನಮ್ಮನ್ನು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಮಾತನಾಡಿ, ಯಾವುದೇ ವಿಷಯವಿರಲಿ ಕಲಿಯುವ ಮುನ್ನ ಅದು ಕಬ್ಬಿಣವಾಗಿರುತ್ತೆ. ಶ್ರದ್ಧೆಯಿಂದ ಕಲಿತ ಮೇಲೆ ಅದು ಕಡಲೆ. ಆದ್ದರಿಂದ ಗುರುಗಳು ಪಾಠದಲ್ಲಿ ನಿರತರಾದಾಗ ನಿಮ್ಮ ಗಮನ ಅವರ ಮೇಲೆ ಅವಲಂಬಿತರಾಗಬೇಕು ಆಗ ನಿಮ್ಮ ಅಕ್ಷರ ಜ್ಞಾನ ವೃದ್ಧಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ, ಸಂಪನ್ಮೂಲ ವ್ಯಕ್ತಿ ಸುರೇಶ್, ಶಾಲೆಯ ಮುಖ್ಯ ಶಿಕ್ಷಕಿ ದೀಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹರೀಶ್, ಶ್ರೀ ನಿವಾಸ್ ಇದ್ದರು.



