ಖಾಸಗಿ ಎಫ್ಎಂ ಹಾಗೂ ವಾಹಿನಿಗಳಲ್ಲಿ ಹಾಡು ಪ್ರಸಾರದ ವಿಷಯವಾಗಿ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಹಾಡು ಪ್ರಸಾರದ ವೇಳೆ ಕೇವಲ ಹಾಡುಗಾರರ ಹೆಸರನ್ನು ಮಾತ್ರ ಹೇಳಲಾಗುತ್ತದೆ, ಆದರೆ ಅದಕ್ಕೆ ಸಂಗೀತ ಸಂಯೋಜಿಸಿದ ಹಾಗೂ ಸಾಹಿತ್ಯ ಬರೆದವರ ಹೆಸರನ್ನು ಹೇಳದೆ ಕಡೆಗಣಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ “ಕೃಷ್ಣಂ ಪ್ರಣಯ ಸಖಿ’ ಚಿತ್ರದ ಪ್ರಚಾರದ ವೇಳೆ ಈ ಬಗ್ಗೆ ಮಾತನಾಡಿದ ಅವರು, “ಇತ್ತೀಚೆಗೆ ದ್ವಾಪರಾ ಹಾಡು ಬಹಳ ಜನಪ್ರಿಯವಾಗಿದೆ. ಎಲ್ಲ ಖಾಸಗಿ ಎಫ್ಎಂ, ವಾಹಿನಿಗಳಲ್ಲಿ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ.
ಪ್ರಸಾರದ ವೇಳೆ ಗಣೇಶ್ ನಟನೆಯ ಚಿತ್ರ ಎಂದಷ್ಟೆ ಉಲ್ಲೇಖೀಸುತ್ತಿದ್ದಾರೆ. ಇದು ಸರಿಯಲ್ಲ. ಕಳೆದ 2 ದಶಕಗಳಲ್ಲಿ ನಾನು ಮೂರು ಸಾವಿರ ಹಾಡು ಬರೆದು, ಈ ಮಾತನ್ನು ಹೇಳುತ್ತಿದ್ದೇನೆ. ಯಾವುದೇ ಹಾಡು, ಎಲ್ಲೆ ಪ್ರಸಾರ ಮಾಡಿದರೂ, ಅದನ್ನು ಹಾಡಿದ ಗಾಯಕರ ಹೆಸರಿನ ಜತೆಗೆ ಹಾಡನ್ನು ಬರೆದ ಸಾಹಿತಿ ಹಾಗೂ ಸಂಗೀತ ಸಂಯೋಜಿಸಿದ ನಿರ್ದೇಶಕರ ಹೆಸರನ್ನು ಹೇಳಲೆಬೇಕು. ಇದು ನನ್ನ ವಿನಂತಿಯಲ್ಲ, ಆಗ್ರಹ.
ಒಂದು ವೇಳೆ ಖಾಸಗಿ ವಾಹಿನಿಗಳು ಹೆಸರು ಹೇಳದಿದ್ದರೆ, ನಾವು ಕೇಸ್ ಹಾಕುತ್ತೇವೆ. ಆ ಹಕ್ಕು ಸರ್ಕಾರ ನಮಗೆ ಕೊಟ್ಟಿದೆ. ಇದು ಕಾನೂನಿನಲ್ಲೂ ಇದೆ. ಇದನ್ನು ಗಂಭೀರವಾಗಿ ಪರಿಗಣಿಸ ಬೇಕು. ಹಾಡು ಪ್ರಸಾರವಾದಾಗ ಗಾಯಕರ ಹೆಸರು ಸಹಜವಾಗಿ ಗೊತ್ತಾಗುತ್ತದೆ. ಆದರೆ, ಹಾಡು ಬರೆದವರ ಹಾಗೂ ಸಂಗೀತ ಸಂಯೋಜಿಸಿದವರ ಹೆಸರು ತಿಳಿಯುವುದೇ ಇಲ್ಲ. ಹಾಗಾಗಿ ಅವರ ಹೆಸರನ್ನು ಉಲ್ಲೇಖೀಸಬೇಕು’ ಎಂದಿದ್ದಾರೆ.