ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಮಳಲಿ ಗ್ರಾಮದ ಹೊರ ವಲಯದಲ್ಲಿರುವ ಸಾರ್ವಜನಿಕ ಕಟ್ಟೆಯನ್ನು ವ್ಯಕ್ತಿಯೋರ್ವ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾನೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಿ.ಎಸ್.ಪೂರ್ಣಿಮ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆ.ಆರ್.ನಗರ-ರಾವಂದೂರು ಜಿಲ್ಲಾ ರಸ್ತೆಯಲ್ಲಿ ಇರುವ ಕಟ್ಟೆ ಒತ್ತುವರಿಯಾಗಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು ಇದರ ಅಳತೆ ಮಾಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಎಲ್ಲರ ಮನವಿಯನ್ನು ಆಲಿಸಿದ ತಹಶೀಲ್ದಾರರು ಈ ಸಂಬAಧ ಭೂಮಾಪನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ದೂರುದಾರರ ಮನವಿ ಮತ್ತು ದಾಖಲೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಿದ್ದು ಆವರೆಗೆ ಎಲ್ಲರೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆಸಿದ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡ ತಹಶೀಲ್ದಾರರು ಸರ್ಕಾರದ ಆದೇಶ ಮತ್ತು ನಿಯಾನುಸಾರ ನಾನು ದಾಖಲೆಗಳನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು. ಕಳೆದ ೮೦ ವರ್ಷಗಳಿಂದ ಈ ಎರೆಕಟ್ಟೆ ಜನ ಮತ್ತು ಜಾನುವಾರುಗಳಿಗೆ ನೀರುಣಿಸಲು ಅನುಕೂಲವಾಗಿದ್ದು ಇದನ್ನು ನಾವು ಪರಿಗಣಿಸಿ ವಸ್ತು ಸ್ಥಿತಿಯನ್ನು ಪರಾಮರ್ಶಿಸಿ ಅಂತಿಮವಾಗಿ ಉತ್ತಮ ನಿರ್ಧಾರ ಕೈಗೊಳ್ಳುತ್ತೇವೆ ಆವರೆಗೂ ಎಲ್ಲರೂ ತಾಲೂಕು ಆಡಳಿತಕ್ಕೆ ಬೆಂಬಲ ನೀಡಿ ಸರ್ಕಾರದ ತೀರ್ಪಿಗೆ ತಲೆಬಾಗಬೇಕೆಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ಹರಿಚಿದಂಬರ್, ರಾಜಸ್ವ ನಿರೀಕ್ಷಕ ಭಾಸ್ಕರ್, ಗ್ರಾಮ ಆಡಳಿತಾಧಿಕಾರಿ ದೀಪಶ್ರೀ, ತಾಲೂಕು ಕಛೇರಿ ಸಿಬ್ಬಂದಿ ಎಂ.ಆರ್.ಪ್ರಸಾದ್, ಭೂಮಾಪಕ ಗುರುಪ್ರಕಾಶ್, ಗ್ರಾ.ಪಂ. ಕಾರ್ಯದರ್ಶಿ ಗೋಪಾಲಸ್ವಾಮಿ, ಗ್ರಾಮದ ಮುಖಂಡರಾದ ಮಾದೇಗೌಡ, ಎಲ್.ಎನ್.ವಿರೇಂದ್ರ, ರಮೇಶ್, ಸೋಮೇಗೌಡ, ನಾಗಣ್ಣ, ಜಯರಾಮನಾಯಕ, ನಾಗೇಶ್, ತಿಮ್ಮೇಗೌಡ, ಮಹೇಶ, ಕೃಷ್ಣನಾಯಕ, ಎಂ.ಜೆ.ಹರೀಶ್, ಸರ್ವಮಂಗಳ, ಕೃಷ್ಣಯ್ಯ, ಶಿವಲಿಂಗಯ್ಯ, ವಿಎಸ್ಎಸ್ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೇಮಕುಮಾರ್ ಮತ್ತಿತರರು ಇದ್ದರು.