ಮಂಗಳೂರು (ದಕ್ಷಿಣ ಕನ್ನಡ) : ಸರಕಾರದ ಪಡಿತರ ಅಕ್ಕಿಯನ್ನು ಖಾಸಗಿ ಕಟ್ಟಡದಲ್ಲಿ ಅಕ್ರಮ ದಾಸ್ತಾನಿರಿಸಲಾಗಿದ್ದ ಸ್ಥಳಕ್ಕೆ ಆಹಾರ ಇಲಾಖಾಧಿಕಾರಿಗಳು ದಾಳಿ ನಡೆಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕಲ್ಲಡ್ಕ ನಿವಾಸಿಗಳಾದ ಗೋಡೌನ್ ನಿರ್ವಾಹಕ ಉಮ್ಮರಬ್ಬ ಹಾಗೂ ಕೆಲಸಗಾರ ರಫೀಕ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಪಟ್ಟೆಕೋಡಿ ಎಂಬಲ್ಲಿರುವ ಅಂಗಡಿ ಕಟ್ಟಡವೊಂದರಲ್ಲಿ, ಪಡಿತರ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಇಡಲಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪ್ರಕರಣದ ಪಿರ್ಯಾದಿದಾರರಾದ ಬಂಟ್ವಾಳ ತಾಲೂಕು ಕಛೇರಿಯ ಆಹಾರ ನಿರೀಕ್ಷಕರಾದ ಎ ಪ್ರಶಾಂತ ಶೆಟ್ಟಿ ರವರು, ಬಂಟ್ವಾಳ ನಗರ ಠಾಣಾ ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ, ಆರೋಪಿ ಬಂಟ್ವಾಳ, ಗೋಳ್ತಮಜಲು ನಿವಾಸಿ ಉಮ್ಮರಬ್ಬ ಎಂಬವರು, ಕಟ್ಟಡವೊಂದರಲ್ಲಿ ಒಟ್ಟು 64 ಗೋಣಿ ಚೀಲಗಳಲ್ಲಿ 58,288/-ಮೌಲ್ಯದ 2103.35 ಕೆ.ಜಿ ಬೆಳ್ತಿಗೆ ಅಕ್ಕಿ ಮತ್ತು 467.10 ಕೆ.ಜಿ ಕುಚ್ಚಲಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ.
ಈ ಅಕ್ಕಿಯನ್ನು ಆಟೋರಿಕ್ಷಾದಲ್ಲಿ ಸಾಗಾಟ ಮಾಡಲು ಸಿದ್ದತೆ ನಡೆಸಿರುವುದು ಕಂಡು ಬಂದಿರುತ್ತದೆ. ಈ ಕೃತ್ಯದಲ್ಲಿ ಆರೋಪಿಯ ಜೊತೆಗೆ ರಫೀಕ್ ಎಂಬಾತನೂ ಭಾಗಿಯಾಗಿದ್ದು, ಸ್ಥಳದಲ್ಲಿದ್ದ ಅಕ್ಕಿಯ ಗೋಣಿ ಚೀಲಗಳನ್ನು, ಸಾಗಾಟ ಮಾಡಲು ಬಳಸಿದ ಆಟೋರಿಕ್ಷಾ, ತೂಕದ ಯಂತ್ರ, ಖಾಲಿ ಗೋಣಿ ಚೀಲಗಳು ಸೇರಿದಂತೆ ಇತರೆ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡು, ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 96/2025, ಕಲಂ 3, 7 ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕಲಂ 18 ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ ( ನಿಯಂತ್ರಣ ಆದೇಶ) 2016 ರಂತೆ ಪ್ರಕರಣ ದಾಖಲಾಗಿದೆ.