ವಿಜಯಪುರ : ನಗರಕ್ಕೆ ೩ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭರವಸೆ ನೀಡಿದರು.
ವಿಜಯಪುರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೊಂಡಿದ್ದು, ಎಲ್ಲ ಭಾಗಕ್ಕೂ ನಿರಂತರ ಮತ್ತು ಸಮಪರ್ಕವಾಗಿ ನೀರು ಒದಗಿಸಲು ೩ನೇ ಹಂತದ ಯೋಜನೆ ಅನುಷ್ಠಾನ ಅಗತ್ಯವಿದೆ ಎಂದರು.
ಶುದ್ಧ ಗಾಳಿ, ಅಭಿವೃದ್ಧಿ, ಗಟ್ಟಿತನ ಹೀಗೆ ಎಲ್ಲದರಲ್ಲೂ ವಿಜಯಪುರ ನಗರ ದೇಶದಲ್ಲಿ ಹೆಸರುವಾಸಿ ಆಗಿದೆ. ಮಾದರಿ ನಗರವಾಗಿ ರೂಪುಗೊಂಡಿರುವ ಮತ ಕ್ಷೇತ್ರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕೆಂದು ಸಾಬರು ನಿರ್ಧರಿಸಿದ್ದಾರೆ. ಖೊಟ್ಟಿ ಮತದಾನ ಮಾಡಿಸಿದ್ದಾರೆ ಅಂತ ಸುಳ್ಳು ಕೇಸ್ ದಾಖಲಿಸಿ ಎರಡ್ಮೂರು ಬಾರಿ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಂಡು, ದಂಡ ಕಟ್ಟಿದ್ದಾರೆ ಎಂದರು.
ಮುಂದುವರೆದು, ನಗರದ ಸುರಕ್ಷತೆಗಾಗಿ ಮತದಾರರು ಜಾಗೃತವಾಗಿ ಆಲಸ್ಯತನ ಮಾಡದೇ ತಪ್ಪದೆ ಎಲ್ಲರೂ ಮತದಾನ ಮಾಡಬೇಕು. ಒಮ್ಮೆ ಕಳೆದುಕೊಂಡರೆ ನಗರದ ಅಭಿವೃದ್ಧಿಯ ವಾತಾವರಣ ಮತ್ತೆ ೨೦ ವರ್ಷ ಹಿಂದಕ್ಕೆ ಹೋಗುತ್ತದೆ ಎಂದರು.
ಧೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಮಾದರಿ ನಗರವಾಗಿ ನಿರ್ಮಾಣಗೊಂಡಿದೆ. ಇಂದು ಕೂಡ ರೂ.೩೨೫ ಲಕ್ಷ ಮೊತ್ತದಲ್ಲಿ ವಾರ್ಡ್ ನಂ.೨೨ ರಲ್ಲಿ ಬರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ದೇವರಾಜ ಅರಸು ವೃತ್ತದ ವರೆಗೆ (ಜಲನಗರ ಮುಖ್ಯರಸ್ತೆ) ಸಿಸಿ ರಸ್ತೆ ಅಭಿವೃದ್ಧಿ, ರೂ.೨೦ ಲಕ್ಷ ಮೊತ್ತದಲ್ಲಿ ರಾಷ್ಟ್ರವೀರ ಶ್ರೀ ವೀರಮಹಾರಾಣಾ ಪ್ರತಾಪಸಿಂಹಜಿ ವೃತ್ತದ ಸುತ್ತಲೂ ಆವರಣ ಗೋಡೆ, ಕೋಬಲ್ ಪೆವಿಂಗ್ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಗಿದೆ.
ಅದೇ ರೀತಿ ರೂ.೧೫೦ ಲಕ್ಷ ಮೊತ್ತದಲ್ಲಿ ವಾರ್ಡ್ ನಂ.೨೧ರಲ್ಲಿ ಬರುವ ಸದಾಶಿವ ನಗರ ಮುಖ್ಯ ರಸ್ತೆಯಿಂದ ಈಶ್ವರ ದೇವಸ್ಥಾನದ ಮೂಲಕ ಏಳು ಮಕ್ಕಳ ತಾಯಿ ಗುಡಿ ವರೆಗಿನ ಪ್ರಮುಖ ಸಿಸಿ ರಸ್ತೆ ಹಾಗೂ ರೇಣುಕಾ ನಗರ ಆಂತರಿಕ ಸಿಸಿ ರಸ್ತೆ ನಿರ್ಮಾಣ, ರೂ.೧೫೦ ಲಕ್ಷ ಮೊತ್ತದಲ್ಲಿ ಗುರುದೇವ ನಗರ ಪಶ್ಚಿಮ ಭಾಗ ಹಾಗೂ ಗುರುದೇವ ನಗರ ಪೂರ್ವ ಭಾಗದ ಆಂತರಿಕ ರಸ್ತೆಗಳ ಡಾಂಬರಿಕರಣ ಕಾಮಗಾರಿ, ರೂ.೨೦೦ ಲಕ್ಷ ಮೊತ್ತದಲ್ಲಿ ಸಾಯಿಪಾರ್ಕ್ ಮುಖ ರಸ್ತೆಯಿಂದ ಗುರುದೇವ ನಗರದ ಮೂಲಕ ಕೊಲ್ಹಾರ ರಸ್ತೆ ಕೂಡುವ ರಸ್ಥೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಕುಮಾರ ಗಡಗಿ, ಗಿರೀಶ ಬಿರಾದಾರ, ಮುಖಂಡರಾದ ಶಂಕರ ಹೂಗಾರ, ಚಂದ್ರಶೇಖರ ಚೌದರಿ, ಮಡಿವಾಳ ಯಾಳವಾರ, ಸಂತೋಷ ತಲಕೇರಿ, ರಾಜಶೇಖರ ಭಜಂತ್ರಿ ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.



