ಚಾಮರಾಜನಗರ: ಏಪ್ರಿಲ್ 24ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. ಮೂರು ಬಾರಿ ಮುಂದೂಡಲ್ಪಟ್ಟಿದ್ದ ಸಭೆ ಈ ಬಾರಿ ನಿರ್ಧಾರಿತ ದಿನಾಂಕದಲ್ಲಿ ಜರುಗುತ್ತಿದೆ.
ವಜ್ರಮಲೆ ಭವನದ ಮುಂಭಾಗ ಖಾಲಿ ಜಾಗದಲ್ಲಿ ಸಭೆ ನಡೆಸಲು ತೀರ್ಮಾನಿಸಲಿದ್ದು, ಭದ್ರತೆಗೆ ಸುಮಾರು 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎರಡು ಡಿಐಜಿ, ಇಬ್ಬರು ಎಸ್ಪಿ, 11 ಡಿವೈಎಸ್ಪಿ, 31 ಇನ್ಸ್ಪೆಕ್ಟರ್ ಸೇರಿದಂತೆ ಹಲವಾರು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಸಿಎಂ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರು, ಶಾಸಕರು, ವಿವಿಧ ಇಲಾಖೆಗಳ ಮುಖ್ಯಸ್ಥರು, ಹಾಗೂ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯ ಹಿನ್ನೆಲೆಯಲ್ಲಿ ಭಕ್ತರಿಗೆ ಮೂರು ದಿನ ವಸತಿ ಗೃಹಗಳಲ್ಲಿ ತಂಗಲು ನಿರ್ಬಂಧ ಹೇರಲಾಗಿದೆ.
69 ಕೋಟಿ ವೆಚ್ಚದಲ್ಲಿ ನಿರ್ಮಿತ ವಜ್ರಮಲೆ ಭವನದಲ್ಲಿ ಈ ಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಿಎಂ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸುಮಾರು 300 ಕೊಠಡಿಗಳಿರುವ ಈ ವಸತಿ ಸಂಕೀರ್ಣದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನ ಕಾರ್ಯಕ್ರಮಗಳು ನಡೆಯುತ್ತಿವೆ.
ಸಭೆಗೆ ಸಂಬಂಧಿಸಿದಂತೆ ವಾಹನ ಪಾರ್ಕಿಂಗ್ ವ್ಯವಸ್ಥೆಯೂ ಕಲ್ಪಿಸಲಾಗಿದ್ದು, ವಿಶೇಷವಾಗಿ ಹೆಲಿಪ್ಯಾಡ್ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಹಳೆಯೂರು ಬಳಿ ತಾತ್ಕಾಲಿಕವಾಗಿ ಮೂರು ಹೆಲಿಪ್ಯಾಡ್ಗಳನ್ನು ಸ್ಥಾಪಿಸಲಾಗಿದೆ.
ಚಾಮರಾಜನಗರದ ಜನರು ಈ ಸಭೆಯಲ್ಲಿ ಜಿಲ್ಲೆಗೆ ವಿಶೇಷ ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆಯಲ್ಲಿ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ನಡೆಯುತ್ತಿರುವ ಮೊದಲ ಸಂಪುಟ ಸಭೆ ಇದಾಗಿದ್ದು, ಜಿಲ್ಲೆಗೆ ನೂತನ ಯೋಜನೆಗಳ ಮುನ್ನುಡಿಯೆಂಬ ಭರವಸೆ ಮೂಡಿಸಿದೆ.