ಬೆಂಗಳೂರು: ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಯ ನಿಟ್ಟಿನಲ್ಲಿ ಪ್ರಸ್ತುತ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ ಅಥವಾ ಬಾಳೆಹಣ್ಣನ್ನು ಈಗಿನಿಂದ ವಾರದಲ್ಲಿ ಆರು ದಿನಗಳವರೆಗೆ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಗುರುವಾರ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 53 ಲಕ್ಷ ಮಕ್ಕಳಿಗೆ ಉತ್ತಮ ಗುಣಮಟ್ಟದ, ಕನಿಷ್ಠ 50ಗ್ರಾಂ ತೂಕದ ಮೊಟ್ಟೆ ಅಥವಾ ಮೊಟ್ಟೆ ಸೇವಿಸದವರಿಗೆ ಪ್ರತಿ ದಿನ ಎರಡು ಉತ್ತಮ ಬಾಳೆಹಣ್ಣು ನೀಡಲಾಗುತ್ತದೆ. ಪೂರಕ ಪೌಷ್ಠಿಕಾಂಶ ರೂಪದಲ್ಲಿ ಈ ವಿತರಣೆ ನಡೆಯಲಿದೆ.
ಶಾಲಾ ಮುಖ್ಯಸ್ಥರು ಪ್ರತಿ ವಾರ ಕನಿಷ್ಠ ಹತ್ತು ಪೋಷಕರನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಆಹ್ವಾನಿಸಬೇಕು. ಮಕ್ಕಳ ದಿನಾಚರಣೆಯಂದು ಎಲ್ಲಾ ಪೋಷಕರನ್ನು ಆಹ್ವಾನಿಸಿ, ಶಾಲಾ ಲೆಕ್ಕಪತ್ರಗಳನ್ನು ಪೋಷಕರ ಸಮ್ಮುಖದಲ್ಲಿ ಓದಿ ವಿವರಿಸಬೇಕು ಎಂದು ಆದೇಶಿಸುತ್ತದೆ.