ಹೊಸೂರು : ಸಮಾಜದ ಸುಧಾರಣೆಗಾಗಿ ದುಡಿದಂತಹಾ ಮಹಾತ್ಮರ ಜಯಂತಿಗಳ ಆಚರಣೆ ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ ಎಲ್ಲಾ ಮಹಾನೀಯರ ಜಯಂತಿಗಳನ್ನು ಒಟ್ಟಾಗಿ ಒಂದು ದಿನ ಆಚರಣೆ ಮಾಡುವ ಮೂಲಕ ಭಾರತೀಯರು ಒಂದೇ ಎಂಬ ಸಂದೇಶವನ್ನು ತಿಳಿಸುವಂತಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ನುಲಿಯಚಂದಯ್ಯ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದ ಏಳಿಗೆಗಾಗಿ ಶ್ರಮಿಸಿದಂತವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.
ಎಲ್ಲಾ ರೀತಿಯಲ್ಲೂ ಹಿಂದುಳಿದ ಸಮುದಾಯಗಳು ಸಂಘಟಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಉದ್ದೇಶದಿಂದ ಸಿದ್ದರಾಮಯ್ಯನವರು ಸೂಕ್ಷ್ಮಾತಿ ಸೂಕ್ಷ್ಮ ಸಮಾಜಗಳ ಜಯಂತಿಗಳನ್ನು ಜಾರಿಗೆ ತಂದಿದ್ದಾರೆ ಎಂದು ಮಾಹಿತಿ ನೀಡಿದ ಶಾಸಕರು ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಸಮುದಾಯದವರು ಸಂಘಟನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಜಯಂತಿ ಆಚರಣೆ ನೆಪದಲ್ಲಿ ಸಮಾಜಗಳು ಸಂಘಟನೆಗೊ0ಡು, ಸಮುದಾಯದ ಉಳ್ಳವರು ಎಲ್ಲಾ ರೀತಿಯಲ್ಲೂ ಹಿಂದುಳಿದವರ ಮೇಲ್ಕೆತ್ತುವ ಕೆಲಸ ಮಾಡಬೇಕು ಆಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಈ ನಿಟ್ಟಿನಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದ ಮುಖಂಡರು ಮತ್ತು ಚುನಾಯಿತ ಸದಸ್ಯರು ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೋರಮ ಮತ್ತು ಈಡಿಗ ಸಮುದಾಯದಂತಹಾ ಸಣ್ಣ ಜಾತಿಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಶಿಕ್ಷಣ ಪ್ರಮುಖವಾಗಿದ್ದು ಇದನ್ನು ಅರಿತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದ ಶಾಸಕ ಡಿ.ರವಿಶಂಕರ್ ಈ ವರ್ಗದ ವಿದ್ಯಾರ್ಥಿಗಳು ಉನ್ನತ್ತ ಶಿಕ್ಷಣ ಪಡೆಯಲು ಸರ್ಕಾರ ಬಿಸಿಎಂ ಇಲಾಖೆ ವತಿಯಿಂದ ಸಾಕಷ್ಟು ಸವಲತ್ತು ನೀಡುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಕೋರಮ ಸಮಾಜದ ಅಧ್ಯಕ್ಷ ಮಹದೇವಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಮಾಜಿ ಸದಸ್ಯ ಕೆ.ವಿನಯ್, ಹೊಸಅಗ್ರಹಾರ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪೂರ್ಣಿಮ, ಮುಖಂಡರಾದ ನರಸಿಂಹಮೂರ್ತಿ, ನಾಗರಾಜು, ಭೇರ್ಯಕೃಷ್ಣ, ರಾಮಚಾರಿ, ಲೋಕೇಶ್, ಕಲ್ಲಹಳ್ಳಿಶ್ರೀನಿವಾಸ್, ಗೋವಿಂದೇಗೌಡ, ಗಂಧನಹಳ್ಳಿಕಿಟ್ಟಿ, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.