ಬೆಂಗಳೂರು: ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡು ಕೆಲಸ ಮಾಡಬೇಕು, ಚುನಾವಣೆ ವೇಳೆ ರಾಜಕಾರಣ ಮಾಡಬೇಕು, ಇತರೆ ಸಮಯದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ಕೊಟ್ಟಿದ್ದಾರೆ.
ಬಿ.ವೈ.ವಿಜಯೇಂದ್ರ ಅವರಿಗೆ ಇಂದು ೪೯ನೇ ಜನ್ಮದಿನದ ಸಂಭ್ರಮವಾಗಿದ್ದು, ಅಭಿಮಾನಿಗಳು, ಆಪ್ತರು, ಕಾರ್ಯಕರ್ತರಿಂದ ಶುಭಾಶಯಗಳ ಮಹಾಪೂರ ಹರಿದುಬಂತು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಮುಂದಿನ ಸಿಎಂ ವಿಜಯೇಂದ್ರ, ಮುಂದಿನ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಬೆಂಬಲಿಗರು, ಅಭಿಮಾನಿಗಳು ಘೋಷಣೆ ಕೂಗಿದರು.
ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬದ ಅವಶ್ಯಕತೆಯಿಲ್ಲ ಎಂದಿದ್ದೆ. ಆದರೂ ಅಭಿಮಾನಿಗಳು ಬಂದು ಶುಭ ಕೋರುತ್ತಿದ್ದಾರೆ. ಅವರಿಗೆ ಋಣಿ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಬರ ಅಧ್ಯಯನ ಪ್ರವಾಸ ಮಾಡಲಿದ್ದಾರೆ. ಏಳು ಮತ್ತು ಎಂಟರಂದು ಜಿಲ್ಲಾ ಪ್ರವಾಸಕ್ಕೆ ಹೋಗಲಿದ್ದಾರೆ ಎಂದರು. ಚಳಿಗಾಲದ ಅಧಿವೇಶನದ ಒಳಗೆ ವಿಪಕ್ಷ ನಾಯಕರ ಆಯ್ಕೆ ಆಗುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದ ಶಾಸಕ ವಿಜಯೇಂದ್ರ, ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರ ಗೌರವಧನ ಬಾಕಿ ಇದೆ. ಇದರಿಂದ ಆರ್ಥಿಕ ಪರಿಸ್ಥಿತಿ ಯಾವ ರೀತಿ ಇದೆ ಅನ್ನೋದು ಗೊತ್ತಾಗುತ್ತಿದೆ. ಬರಪೀಡಿತ ತಾಲೂಕು ಘೋಷಣೆ ಮಾಡುವುದಕ್ಕೂ ಮೀನಮೇಷ ಮಾಡಿದ್ದರು. ಈಗಲಾದರೂ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.