ಮೈಸೂರು: ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ನಗರದ ಉದ್ಯಮಿ ಪಾರ್ವತಿದೇವಿ ಅವರಿಂದ ಆನ್ಲೈನ್ ಮೂಲಕ ರೂ. ೧.೩೯ ಕೋಟಿ ಪಡೆದು ವಂಚಿಸಿದ್ದಾರೆ.
ಸೆ.೧೮ರಂದು ಪಾರ್ವತಿ ಅವರಿಗೆ ಕರೆ ಮಾಡಿದ ವ್ಯಕ್ತಿ ತನ್ನನ್ನು ದೆಹಲಿಯ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಟೆಲಿಕಾಂ ರಿಜಿಸ್ಟರಿಂಗ್ ಅಥಾರಿಟಿ ಆಫ್ ಇಂಡಿಯಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ, ದೆಹಲಿಯಲ್ಲಿ ನಿಮ್ಮ ಹೆಸರಿನಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಖಾತೆ ತೆರೆದು ಕೋಟ್ಯಂತರ ರೂಪಾಯಿ ವ್ಯವಹಾರವನ್ನು ಮಾಡಲಾಗಿದೆ. ಆಧಾರ್ ಕಾರ್ಡ್ನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬೆದರಿಸಿದ್ದಾನೆ.
ಮಹಿಳೆಗೆ ಬಂಧನದ ವಾರಂಟ್ ಪ್ರತಿ, ಜಾಮೀನು ಭದ್ರತಾ ಬಾಂಡ್ನ ನಕಲಿ ಪ್ರತಿ ಕಳಿಸಿ ೨ ಕೋಟಿಯನ್ನು ಸೆಕ್ಯೂರಿಟ್ ಬಾಂಡ್ ಇಡಬೇಕು. ಪ್ರಕರಣದ ತನಿಖೆ ಮುಗಿದ ಬಳಿಕ ಅ.೧೦ರಂದು ಹಣ ಹಿಂದಿರುಗಿಸುತ್ತೇವೆ ಎಂದು ತಿಳಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಆತ ತಿಳಿಸಿದ್ದ ಖಾತೆಗೆ ಹಂತ ಹಂತವಾಗಿ ಹಣ ಕಳುಹಿಸಿದ್ದಾರೆ. ಹಣವನ್ನು ಹಿಂದುರಿಗಿಸದೆ, ಸಂಪರ್ಕಕ್ಕೂ ಸಿಗದೆ ಇದ್ದಾಗ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.