Sunday, January 11, 2026
Google search engine

Homeರಾಜ್ಯಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ

ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ

ಬ್ಯಾರಿ ಕೇವಲ ಒಂದು ಭಾಷೆಯಲ್ಲ. ಅದು ಸಂಸ್ಕೃತಿಯೂ ಆಗಿದೆ. ಜಾನಪದ ಹಿನ್ನಲೆಯೂ ಅದಕ್ಕಿದೆ. ಹೀಗಾಗಿ ಬ್ಯಾರಿಯನ್ನು ಭಾಷೆ ಮತ್ತು ವ್ಯಾಪಾರ ಪರಿಧಿಗೆ ಸೀಮಿತಗೊಳಿಸದೆ ಬ್ಯಾರಿಗಳ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಎ.ಎಂ.ಖಾನ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ‌ನಗರದ ಹೋಟೆಲ್ ಶ್ರೀನಿವಾಸ್‌ನ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾರಿಗಳ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ವಿಭಿನ್ನವಾಗಿದೆ. ಪ್ರಾದೇಶಿಕ ಭಿನ್ನತೆಯೂ ಇದೆ. ವ್ಯಾಪಾರ, ಉದ್ದಿಮೆಯಲ್ಲೂ ಬ್ಯಾರಿಗಳು ಮುಂಚೂಣಿಯಲ್ಲಿದ್ದಾರೆ. ಅದೆಷ್ಟೋ ಬ್ಯಾರಿ ಹಿರಿಯರು ನ್ಯಾಯವಾದಿ, ವೈದ್ಯರಾಗಿ ಕಾರ್ಯನಿರ್ವಹಿಸಿದ ನಿದರ್ಶನವೂ ಇದೆ. ಅದನ್ನು ಮುಂದಿನ ಪೀಳಿಗೆ ಮುಂದುವರಿಸುವ ಸಲುವಾಗಿ ಯುವ ಸಮೂಹದಲ್ಲಿ ಜಾಗೃತಿ ಸೃಷ್ಟಿಸಬೇಕಿದೆ ಎಂದು ಎ.ಎಂ. ಖಾನ್ ಹೇಳಿದರು.
ನೂತನ ಶಿಕ್ಷಣ ನೀತಿಯಲ್ಲಿ ಸಾಧಕಗಳೂ ಇವೆ. ಕೌಶಲ ಅಭಿವೃದ್ಧಿಗೆ ಅವಕಾಶವೂ ಇದೆ. ಈ ನಿಟ್ಟಿನಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಗಮನಹರಿಸಿ ಮುಸ್ಲಿಂ ಯುವ ಸಮೂಹದ ಕೌಶಲವನ್ನು ಹೊರತೆಗೆಯಲು ಪ್ರಯತ್ನಿಸಬೇಕಿದೆ ಎಂದು ಎ.ಎಂ. ಖಾನ್ ಕರೆ ನೀಡಿದರು.
‘ನೂತನ ಶಿಕ್ಷಣ ನೀತಿಯ ಬಿಕ್ಕಟ್ಟುಗಳು’ ಎಂಬ ವಿಷಯದಲ್ಲಿ ಮಾತನಾಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಮಾಣಿ, ನಮ್ಮಲ್ಲಿ ಅದೆಷ್ಟೋ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗ ಮಾಡಿದ್ದಾರೆ. ಅವರನ್ನು ಸಮುದಾಯ ಹೇಗೆ ಗೌರವಿಸಿದೆ ಮತ್ತು ಅವರು ಸಮಾಜಕ್ಕೆ ಯಾವ ರೀತಿಯ ಕೊಡುಗೆ ನೀಡಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ. ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತುಕೊಡುವುದರೊಂದಿಗೆ ಮೌಲ್ಯಾಧಾರಿತ ಶಿಕ್ಷಣದ ಕಡೆಗೂ ಗಮನಹರಿಸಬೇಕಿದೆ. ಆಡಳಿತಾತ್ಮಕ ಹುದ್ದೆ ಪಡೆಯಲು ಯುವ ಜನಾಂಗ ಪ್ರಯತ್ನ ಮಾಡಬೇಕಿದೆ ಎಂದರು.
ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಎ.ಎಂ.ಖಾನ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಹೀದ್, ಟ್ರಸ್ಟ್‌ನ ಗೌರವಾಧ್ಯಕ್ಷ ಬಿ.ಎಂ. ಹನೀಫ್, ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಮಾಣಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಲೀಗಲ್ ರಿಸರ್ಚ್ ಅಂಡ್ ಜಸ್ಟಿಸ್ ಟ್ರಸ್ಟ್ ಅಧ್ಯಕ್ಷ ಬಿ. ಇಬ್ರಾಹಿಂ,ಮೀಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಕೋಶಾಧಿಕಾರಿ ಎಂ.ಎಚ್. ಮಯ್ಯದ್ದಿ ಬ್ಯಾರಿ ಅಡ್ಡೂರು, ಕಾರ್ಯದರ್ಶಿ ಎಂ.ಎ. ಬಾವಾ ಪದರಂಗಿ, ಮುಖ್ಯ ಸಲಹೆಗಾರ ಮುಹಮ್ಮದ್ ಕುಳಾಯಿ, ಟ್ರಸ್ಟಿಗಳಾದ ಎಂ.ಬಿ. ಅಬ್ದುಲ್ ನಝೀರ್ ಮಠ, ಎಸ್. ಅಬ್ದುಲ್ ಮಜೀದ್ ಕಣ್ಣೂರು, ಅಬ್ದುಲ್ ಸಲಾಂ ಅಬೂಬಕರ್ ತೋಡಾರ್, ಎಸ್. ಅಬ್ದುಲ್ ರಝಾಕ್ ಸೂರಿಂಜೆ, ಎನ್.ಇ. ಮುಹಮ್ಮದ್ ಮಲ್ಲೂರು, ಎಂ.ಅಬ್ದುಲ್ ಬಶೀರ್ ಮೊಂಟೆಪದವು, ಎಸ್.ಎ. ಮುಹಮ್ಮದ್ ಕುಂಞಿ ಉಪ್ಪಿನಂಗಡಿ, ಮುಹಮ್ಮದ್ ಜಾಬಿರ್ ಜೋಕಟ್ಟೆ ಪಾಲ್ಗೊಂಡಿದ್ದರು.
ಟ್ರಸ್ಟ್‌ನ ಗೌರವಾಧ್ಯಕ್ಷ ಬಿ.ಎಂ. ಹನೀಫ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಎ.ಷಂಶುದ್ದೀನ್ ಮಡಿಕೇರಿ ಸ್ವಾಗತಿಸಿದರು. ಟ್ರಸ್ಟಿ ರಿಯಾಝ್ ಹುಸೈನ್ ಬಂಟ್ವಾಳ ವಂದಿಸಿದರು. ಉಪಾಧ್ಯಕ್ಷ ಬಿ.ಎ.ಮುಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular