Saturday, June 21, 2025
Google search engine

Homeರಾಜ್ಯಸುದ್ದಿಜಾಲಸಜೀಪದ ದೇರಾಜೆಯಲ್ಲಿ ಇಬ್ಬರನ್ನು ಅಟ್ಟಿಸಿಕೊಂಡು ಬಂದ ಘಟನೆ; ತಲವಾರು ದಾಳಿ ಸುದ್ದಿ ಸುಳ್ಳು ಎಂದು ಸ್ಪಷ್ಟನೆ

ಸಜೀಪದ ದೇರಾಜೆಯಲ್ಲಿ ಇಬ್ಬರನ್ನು ಅಟ್ಟಿಸಿಕೊಂಡು ಬಂದ ಘಟನೆ; ತಲವಾರು ದಾಳಿ ಸುದ್ದಿ ಸುಳ್ಳು ಎಂದು ಸ್ಪಷ್ಟನೆ

ಮಂಗಳೂರು (ದಕ್ಷಿಣ ಕನ್ನಡ): ಸ್ಕೂಟರಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೋರ್ವ ಅಟ್ಟಿಸಿಕೊಂಡು ಬಂದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪದ ದೇರಾಜೆಯ ಬಸ್ ನಿಲ್ದಾಣದ ಬಳಿ ರಾತ್ರಿ
ನಡೆದಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ರಾತ್ರಿ ಸಜೀಪದಲ್ಲಿ ಇಬ್ಬರ ಮೇಲೆ ತಲವಾರು ದಾಳಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ರಾತ್ರಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರ ಮೇಲೆ ಸಜೀಪದ ದೇರಾಜೆ ಎಂಬಲ್ಲಿ ತಲವಾರು ದಾಳಿ ಯತ್ನ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಘಟನಾ ಸ್ಥಳದಲ್ಲಿ ಜನರು ಜಮಾವಣೆಗೆ ಕಾರಣವಾಗಿತ್ತು. ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಸಜೀಪ ದೇರಾಜೆಯಲ್ಲಿ ಗುರುವಾರ ರಾತ್ರಿ ತಲವಾರು ದಾಳಿಯಂತಹ ಘಟನೆ ನಡೆದಿಲ್ಲ. ಆದರೆ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬೊಳಿಯಾರು ಕಡೆಯಿಂದ ಮೆಲ್ಕಾರ್ ನತ್ತ ಸಂಬಂಧಿಕರೊಬ್ಬರ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ದೇರಾಜೆಯಲ್ಲಿ ಹೆಲ್ಮೆಟ್ ಧರಿಸಿ ಸ್ಕೂಟರ್ ನಲ್ಲಿ ಕುಳಿತಿದ್ದ ಇಬ್ಬರ ಪೈಕಿ ಓರ್ವ ತಮ್ಮನ್ನು ಅಟ್ಟಿಸಿಕೊಂಡು ಬಂದಿರುವುದಾಗಿ ಮುಹಮ್ಮದ್ ಮಕ್ಬೂಲ್ ಎಂಬವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.ಈ ಮಧ್ಯೆ ಕಳೆದ ವಾರ ಸಜೀಪದ ದೇರಾಜೆಯಲ್ಲಿ ನಡೆದ ಕೊಲೆ ಯತ್ನ ಪ್ರಕರಣ ಹಾಗೂ ಬಕ್ರೀದ್ ಸಂದರ್ಭದಲ್ಲಿ ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳದ ಸಮೀಪ ಸಿಕ್ಕಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳಿಗೂ ದೂರುದಾರರು ನೀಡಿರುವ ದೂರಿಗೂ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಪರಿಶೀಲನೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular