ಮೈಸೂರು: ರಾಜ್ಯದಲ್ಲಿ ಪೂರ್ವಮುಂಗಾರು ಚುರುಕಾಗಿ ಮಳೆಯಾಗುತ್ತಿದ್ದು, ಕೇರಳದ ವೈನಾಡಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ನಿವಾಸಿಗಳಿಗೆ ಸ್ಥಳಾಂತರದ ಎಚ್ಚರಿಕೆ ನೀಡಲಾಗಿದೆ.
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ 18,000 ಕ್ಯೂಸೆಕ್ ನೀರು ಒಳಹರಿದು ಬರುತ್ತಿದ್ದು, ಇದರ ಫಲವಾಗಿ 9,000 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಈ ನೀರು ತಮಿಳುನಾಡಿಗೆ ಹರಿಯಲಿದೆ. ಜಲಾಶಯದ ಒಟ್ಟು ಎತ್ತರ 2284 ಅಡಿ, ಪ್ರಸ್ತುತ ನೀರಿನ ಮಟ್ಟ 2280.50 ಅಡಿಯಾಗಿದ್ದು, ರಾಜ್ಯದಲ್ಲಿ ಮೊದಲು ಭರ್ತಿಯಾಗಿರುವ ಏಕೈಕ ಜಲಾಶಯವಾಗಿದೆ. ವರ್ಷದಲ್ಲಿ ಎರಡು ಬಾರಿ ಭರ್ತಿಯಾಗುವ ಈ ಜಲಾಶಯದಿಂದ ಮತ್ತಷ್ಟು ನೀರು ಬಿಡುಗಡೆ ಸಾಧ್ಯತೆ ಇದೆ.