ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಸಂಘರ್ಷದ ನಡುವೆಯೂ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಮಹತ್ವದ ಯಶಸ್ಸು ಲಭಿಸಿದೆ. ಭಾರತಕ್ಕಾಗಿ ಸುಮಾರು 2.70 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಮಾರ್ಷಲ್ ಐಲ್ಯಾಂಡ್ಸ್ನ ‘ನಿಸೋಸ್ ಕೆರೋಸ್’ ಟ್ಯಾಂಕರ್, ಅತ್ಯಂತ ಸೂಕ್ಷ್ಮ ಪ್ರದೇಶವಾದ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ.
ಈ ಟ್ಯಾಂಕರ್ ಅನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಾಗಿ ಚಾರ್ಟರ್ ಮಾಡಲಾಗಿದ್ದು, ಇದು ಜೂನ್ 3, 2026 ರ ವೇಳೆಗೆ ವಿಶಾಖಪಟ್ಟಣಂ ಬಂದರನ್ನು ತಲುಪುವ ನಿರೀಕ್ಷೆಯಿದೆ.
ಪರಿಸ್ಥಿತಿಯ ವಿವರ ನೀಡಿದ ಕೇಂದ್ರ ಸಚಿವಾಲಯ
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಟ್ಯಾಂಕರ್ನಲ್ಲಿ 25 ಮಂದಿ ವಿದೇಶಿ ಸಿಬ್ಬಂದಿ ಇದ್ದಾರೆ. ಇದರಲ್ಲಿ ಯಾವುದೇ ಭಾರತೀಯ ನಾವಿಕರು ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ವಲಯದ ಇತರ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಭಾರತೀಯ ನಾವಿಕರು ಸುರಕ್ಷಿತ
ಪರ್ಷಿಯನ್ ಗಲ್ಫ್ (ಪರ್ಷಿಯನ್ ಕೊಲ್ಲಿ) ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಕಳೆದ 96 ಗಂಟೆಗಳಲ್ಲಿ ಯಾವುದೇ ಭಾರತೀಯ ಹಡಗು ಅಥವಾ ಭಾರತೀಯ ಸಿಬ್ಬಂದಿ ಇರುವ ವಿದೇಶಿ ಹಡಗುಗಳಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಕಂಟ್ರೋಲ್ ರೂಮ್ಗೆ ಹರಿದುಬಂದ ಸಾವಿರಾರು ಕರೆ, ಇಮೇಲ್ಸ್
ಡಿಜಿ ಶಿಪ್ಪಿಂಗ್ ಕಂಟ್ರೋಲ್ ರೂಮ್ (DG Shipping Control Room) ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಈ ಕಂಟ್ರೋಲ್ ರೂಮ್ ಆರಂಭವಾದಾಗಿನಿಂದ ಇದುವರೆಗೆ 10,841 ಕರೆಗಳು ಮತ್ತು 24,098 ಕ್ಕೂ ಹೆಚ್ಚು ಇಮೇಲ್ಗಳನ್ನು ಸ್ವೀಕರಿಸಲಾಗಿದೆ. ಕೇವಲ ಕಳೆದ 96 ಗಂಟೆಗಳಲ್ಲೇ ನಾವಿಕರು, ಅವರ ಕುಟುಂಬಸ್ಥರು ಮತ್ತು ಕಡಲ ವಲಯದ ಪಾಲುದಾರರಿಂದ 509 ಕರೆಗಳು ಹಾಗೂ 1,332 ಇಮೇಲ್ಗಳು ಬಂದಿವೆ.
ಸಾವಿರಾರು ಭಾರತೀಯ ನಾವಿಕರ ಸುರಕ್ಷಿತ ವಾಪಸಾತಿ
ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ ಇದುವರೆಗೆ 3,422 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸರ್ಕಾರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ. ಈ ಪೈಕಿ ಕಳೆದ 96 ಗಂಟೆಗಳಲ್ಲಿ 47 ನಾವಿಕರು ತಾಯ್ನಾಡಿಗೆ ಮರಳಿದ್ದಾರೆ.
ಇರಾನ್ ನಿಂದ ಭಾರತೀಯರ ಸ್ಥಳಾಂತರ ಮುಂದುವರಿಕೆ
ಸರ್ಕಾರವು ತಹರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್ನಿಂದ 2,557 ಭಾರತೀಯ ನಾಗರಿಕರನ್ನು ಭೂ ಗಡಿ ಮಾರ್ಗಗಳ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ. ಭಾರತದಾದ್ಯಂತ ಬಂದರುಗಳ ಕಾರ್ಯಾಚರಣೆಯು ಎಂದಿನಂತೆ ಮುಂದುವರಿದಿದ್ದು, ಎಲ್ಲೂ ಕೂಡ ದಟ್ಟಣೆಯ (crowding) ವರದಿಯಾಗಿಲ್ಲ.
ಪಶ್ಚಿಮ ಏಷ್ಯಾದ ವಿದ್ಯಮಾನಗಳ ಮೇಲೆ ಭಾರತದ ವಿದೇಶಾಂಗ ಸಚಿವಾಲಯವು ತೀವ್ರ ನಿಗಾ ಇಟ್ಟಿದ್ದು, ಆ ವಲಯದಲ್ಲಿರುವ ಭಾರತೀಯ ಸಮುದಾಯದ ರಕ್ಷಣೆ, ಸುರಕ್ಷತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. (ಏಜೆನ್ಸಿಸ್)



