ಮಂಡ್ಯ: ಯೋಗ ಎಂದರೆ ಇಡೀ ವಿಶ್ವವೇ ಭಾರತ ದೇಶವನ್ನು ತಿರುಗಿ ನೋಡುವ ರೀತಿ ಭಾರತ ದೇಶ ಸಾಧನೆ ಮಾಡಿದೆ. ಯೋಗಕ್ಕೆ ಭಾರತ ದೇಶವೇ ವಿಶ್ವಗುರು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಅವರು ಇಂದು ಪಿ.ಇ.ಟಿ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಯೋಗ ಎನ್ನುವುದು ಭಾರತ ದೇಶದ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರು ಯೋಗ ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಯೋಗ ಎಂಬುದು ಕೇವಲ ದೈಹಿಕವಾದ ವ್ಯಯಮ ಮಾತ್ರವಲ್ಲ, ಪ್ರತಿಯೊಬ್ಬರ ಜೀವನ ಕ್ರಮ ಮತ್ತು ಆರಾಧನೆಯ ಭಾಗವಾಗಬೇಕು. ಜನರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗದ ಅವಶ್ಯಕತೆ ಇದೆ ಎಂದರು.
ರೋಗ ಬರುವ ಮೊದಲು ಯೋಗವನ್ನು ರೂಢಿಸಿಕೊಳ್ಳಿ. ಯೋಗದಿಂದ ಜೀವನಶೈಲಿ ಸಹ ಬದಲಾಗುತ್ತದೆ. ವಿದ್ಯಾರ್ಥಿಗಳು ಚಿಕ್ಕಂದಿನಿAದಲೇ ಯೋಗವನ್ನು ಅಭ್ಯಾಸ ಮಾಡಿದರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಬಹುದು ಎಂದರು.
ಯೋಗ ಮನಸ್ಸನ್ನು ಹೂವಿನಂತೆ ಅರಳಿಸುತ್ತದೆ. ಯೋಗ ಮಾಡುವವರು ಹೊರ ಪ್ರಪಂಚವನ್ನು ನೋಡುವ ದೃಷ್ಠಿಕೋನ ಉತ್ತಮವಾಗಿರುತ್ತದೆ. ದಿನದ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಟ್ಟರೆ ಇನ್ನುಳಿದ 23 ಗಂಟೆ ಕೆಲಸವನ್ನು ಸಮರ್ಪಕವಾಗಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರು ಮಾತನಾಡಿ ಯೋಗಾಸನವನ್ನು ಕೇವಲ ಒಂದು ದಿನಕ್ಕೆ ಮೀಸಲಿಡದೆ ಪ್ರತಿದಿನ ಅಭ್ಯಾಸ ಮಾಡಿ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ. ಎಲ್ಲಾ ವಯೋಮಿತಿ ಅವರು ಯೋಗಾಭ್ಯಾಸವನ್ನು ಮಾಡಬಹುದು ಎಂದು ಕಿವಿಮಾತು ಹೇಳಿದರು.
ಚಂದ್ರವನ ಆಶ್ರಮದ ಬೇಬಿ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರು ಮಾತನಾಡಿ ಪ್ರಪಂಚದ ಎಲ್ಲಡೆ ಆಚರಿಸುವ ಭಾರತದ ಹಬ್ಬ ಎಂದರೆ ಯೋಗಾಸನ. ವಿಶ್ವಕ್ಕೆ ಯೋಗಸನವನ್ನು ಪರಿಚಯಿಸಿದ ದೇಶ ಭಾರತ ಎಂದರು.
ನಮ್ಮ ಜೊತೆ ಸದಾ ಕಡೆ ತನಕ ಇರುವ ಸಂಗಾತಿ ಎಂದರೆ ನಮ್ಮ ದೇಹ, ಆದರಿಂದ ದೇಹವನ್ನು ಆರೋಗ್ಯವಾಗಿ ಇಟ್ಟಿಕೊಳ್ಳಲು ವ್ಯಾಯಾಮ, ಧ್ಯಾನ, ಯೋಗ ಹಾಗೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಇವುಗಳನ್ನು ರೂಢಿಸಿಕೊಳ್ಳಲು ಯಾವುದೇ ಅಧ್ಯಾಯನದ ಅವಶ್ಯಕತೆ ಇಲ್ಲ. ದೇಹವನ್ನು ಪ್ರೀತಿಸಿ ಹಾಗೂ ಗೌರವಿಸಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಭಾತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ: ಪುಷ್ಪಾ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.