ಗುಂಡ್ಲುಪೇಟೆ: ಜನಸಂಖ್ಯೆ ವಿಷಯದಲ್ಲಿ ಈಗ ಚೀನಾ ಹಿಂದಿಕ್ಕಿ ವಿಶ್ವದಲ್ಲಿ ನಾವೇ ಮೊದಲಿಗರಾಗಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀದಾಸ್ ಹೇಳಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಜನಸಂಖ್ಯೆ 500 ಕೋಟಿ ದಾಟಿದ 1987 ಜು.11 ರ ದಿನವನ್ನು ವಿಶ್ವಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತಿದೆ. ಜನಸಂಖ್ಯೆ ಸ್ಪೋಟದಿಂದ ನೀರು, ಆಹಾರ, ಬಟ್ಟೆ, ನೆಲ, ಖನಿಜ, ಸಸ್ಯ ಸಂಪತ್ತಿನ ಕೊರತೆ ಉಂಟಾಗುತ್ತದೆ. ವಾಯು, ಜಲ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಕೊಳಚೆ ಪ್ರದೇಶಗಳ ಪ್ರಮಾಣ ಹೆಚ್ಚಾಗುತ್ತವೆ. ಸಾಂಕ್ರಾಮಿಕ ರೋಗ ಉಂಟಾಗುತ್ತದೆ. ನಿರುದ್ಯೋಗ ಸಮಸ್ಯೆ ಸೇರಿ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಪರಿಣಾಮಗಳ ಬಗ್ಗೆ ತಿಳಿಸಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ತೊಡಗಿಸಿಕೊಳ್ಳಬೇಕು ಎಂದರು.
ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸಬೇಕು. ಏನೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ. ಜನಸಂಖ್ಯಾ ಸ್ಪೋಟ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ತಿಳಿಸಿದರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಲಲಿತಾ ಮಾತನಾಡಿ, ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳವಾಗುತಿದ್ದು, ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತೊಡಕು ಉಂಟಾಗುತ್ತಿದೆ.ಹಾಗಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಜನರಿಗೆ ಅರಿವು ಮಾಡಿಸಬೇಕು ಹಾಗೂ ಒಂದು ಮಗುವಿನ ನಂತರ ಮತ್ತೊಂದು ಮಗುವಿನ ಅಂತರ ಮೂರು ವರ್ಷವಿರಬೇಕು. ಆಗ ಜನಸಂಖ್ಯೆಯನ್ನು ನಿಯಂತ್ರಣ ಮಾಡಲು ಸಾಧ್ಯ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಗಂಡು ಮಗುವಿನ ಬಗ್ಗೆ ವ್ಯಾಮೋಹವಿದ್ದು, ಒಂದು ಮಗುವಿದ್ದರೆ ಮತ್ತೊಂದು ಮಗುಬೇಕು ಎನ್ನುವ ಪದ್ದತಿ ಇದೆ. ಆದ್ದರಿಂದ ಆರೋಗ್ಯ ಕಾರ್ಯಕರ್ತರು ಅಂತಹವರ ಮನವೊಲಿಸಿ ಒಂದೆ ಮಗು ಸಾಕು. ಅದಕ್ಕೆ ಉತ್ತಮ ಶಿಕ್ಷಣ ನೀಡುವಂತೆ ದಂಪತಿಗಳ ಮನವೊಲಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ವಸಂತಕುಮಾರಿ ಮಾತನಾಡಿ, ಜನಸಂಖ್ಯಾ ಹೆಚ್ಚಳದಿಂದಾಗುವ ಸಮಸ್ಯೆಗಳು ದೇಶದ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. ಹಾಗಾಗಿ ಜನಸಂಖ್ಯಾ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಜನಸಂಖ್ಯೆಯ ಮೌಲ್ಯವನ್ನು ಬಲಪಡಿಸಲು ಕುಟುಂಬ ಕಲ್ಯಾಣಾ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಮುದಾಯದ ಅಗತ್ಯತೆಯಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇ.ಎನ್.ಟಿ ವೈದ್ಯ ಹರ್ಷದ್ ಅಲಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸ್ವಾಮಿ, ನೌಕರಾದ ಚಂದ್ರಶೇಖರ್, ಮಂಜುನಾಥ್, ಶ್ರೀನಿವಾಸಬಾಬು ಸೇರಿದಂತೆ ತಾಲೂಕಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹಾಜರಿದ್ದರು.