ಚಾಮರಾಜನಗರ: ಭಾರತ ಪುಣ್ಯಭೂಮಿ. ಹಲವಾರು ಮಹಾನ್ ಪುರುಷರ ದೇಶವಾಗಿದೆ. ಭಾರತದ ಸಂಸ್ಕೃತಿ, ಚಿಂತನೆ ಸಂಸ್ಕಾರಗಳು ಜಗತ್ಪ್ರಸಿದ್ಧವಾಗಲು ಮಹನೀಯರ ಪ್ರಭಾವವೇ ಕಾರಣವೆಂದು ಸಂಸ್ಕೃತಿ ಚಿಂತಕ ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ಎನ್ ಋಗ್ವೇದಿ ತಿಳಿಸಿದರು.
ಅವರು ಶಂಕರಪುರ ಶ್ರೀರಾಮ ಮಂದಿರದಲ್ಲಿ ಬ್ರಾಹ್ಮಿ ಮಹಿಳಾ ಸಂಘ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ರಾಧಾಕೃಷ್ಣನ್ ಮತ್ತು ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಮಾತನಾಡುತ್ತಾ ಸರ್ ಎಂ ವಿಶ್ವೇಶ್ವರಯ್ಯನವರು ವಿಶ್ವದ ಪ್ರಸಿದ್ಧ ಜ್ಞಾನಿ. ಭಾರತವನ್ನು ವಿಶ್ವಖ್ಯಾತಿಗೊಳಿಸಿದವರು. ಅವರ ಜ್ಞಾನ ಪ್ರಭೆ ಯ ಪ್ರಭಾವ ಶತಮಾನಗಳಾದರು ಇಂದಿಗೂ ಪ್ರತಿಯೊಬ್ಬ ಮಾನವನ ಬದುಕಿನಲ್ಲೂ ಉಳಿದಿದೆ. ಮಹಾನ್ ಶ್ರೇಷ್ಠ ವಿಶ್ವೇಶ್ವರಯ್ಯನವರ ದಿವ್ಯ ಆದರ್ಶಗಳು ನಮ್ಮೆಲ್ಲರಲ್ಲೂ ಹೊಸ ಸ್ಪೂರ್ತಿಯನ್ನು ,ಚೈತನ್ಯವನ್ನು, ಕಾರ್ಯ ಬದ್ಧತೆಯನ್ನು ಹೆಚ್ಚಿಸುತ್ತದೆ. ಶಿಕ್ಷಣ, ಸಾಹಿತ್ಯ ಸಂಸ್ಕೃತಿ ,ಪರಂಪರೆ, ನೀರಾವರಿ, ವಿಜ್ಞಾನ, ಕೈಗಾರಿಕೆ, ಗುಡಿ ಕೈಗಾರಿಕೆ, ಸೇತುವೆಗಳು ,ಅಣೆಕಟ್ಟೆಗಳು ಪ್ರತಿ ಕ್ಷೇತ್ರದಲ್ಲೂ ತಮ್ಮದೇ ಆದ ವಿಶೇಷ ಜ್ಞಾನ ಬಂಡಾರದ ಚಿಂತನೆಗಳ ಮೂಲಕ ಮಾರ್ಗವನ್ನು ನೀಡಿ ಕೋಟ್ಯಾಂತರ ಜನರಿಗೆ ಬದುಕುವ ಹೆಜ್ಜೆಗಳನ್ನು ದಾಖಲಿಸಿದವರು ಎಂದು ತಿಳಿಸಿದರು.
ಎಸ್. ರಾಧಾಕೃಷ್ಣನ್ ರವರು ಬಹುದೊಡ್ಡ ತತ್ವಜ್ಞಾನಿ. ಭಾರತೀಯ ವೇದಗಳು, ಉಪನಿಷತ್ತುಗಳು, ತತ್ವ ಬಂಡಾರಗಳನ್ನು, ಜಗತ್ತಿಗೆ ತಿಳಿಸಿ ಭಾರತೀಯರ ಶ್ರೇಷ್ಠತೆಯನ್ನು ತಿಳಿಸಿದವರು. ಭಾರತದ ಜ್ಞಾನ ಸಂಪತ್ತಿನ ಶ್ರೇಷ್ಠರಾಗಿದ್ದ ಇವರುಗಳ ಆದರ್ಶವನ್ನು ಅವರ ಸಾಹಿತ್ಯ ಚಿಂತನೆಯನ್ನು ,ತತ್ವದರ್ಶಗಳನ್ನು ಯುವ ಪೀಳಿಗೆಗೆ ಮನಮುಟ್ಟುವಂತೆ ತಿಳಿಸುವ ಕಾರ್ಯವನ್ನು ಹಿರಿಯರು ಮಾಡಬೇಕಾಗಿದೆ ಎಂದರು.
ಶಿಕ್ಷಕರ ದಿನಾಚರಣೆ ಮತ್ತು ಇಂಜಿನಿಯರ್ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಾದ ಗಾಯತ್ರಿ ರಾಮಣ್ಣ ಹಾಗೂ ರಾಜೇಂದ್ರ ಪ್ರಸಾದ್ ರವರನ್ನು ಹಾಗೂ ನೂತನ ನಗರಸಭಾ ಉಪಾಧ್ಯಕ್ಷರಾದ ಮಮತಾ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ನಿವೃತ್ತ ಉಪನ್ಯಾಸಕ ಸುದರ್ಶನ್ ರವರು ಮಾತನಾಡಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವ ಮೂಲಕ ನಾಡಿಗೆ ಶಿಕ್ಷಕರ ದೊಡ್ಡ ಕೊಡುಗೆಯನ್ನು ಮತ್ತು ಸಮಾಜಕ್ಕೆ ಅವರ ಪಾತ್ರವನ್ನು ಸದಾ ಕಾಲ ಸ್ಮರಿಸಲು ಅವಕಾಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಿ ಮಹಿಳಾ ಸಂಘದ ವತ್ಸಲಾ ರಾಜಗೋಪಾಲ್, ರೇಖಾ,ಭಾನುಮತಿ, ಪಾರ್ವತಿ ಹಾಗು ಸದಸ್ಯರು ಇದ್ದರು.