ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮಠ ಮತ್ತು ದೇವಸ್ಥಾನಗಳನ್ನು ಕಟ್ಟುವ ಬದಲು ತಮ್ಮ ಮಕ್ಕಳ ಶಿಕ್ಷಣದ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಪೋಷಕರು ಮುಂದಾಗಬೇಕು ಎಂದು ಮೈಸೂರು ಯುವರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಡಿ.ಪರಶರಾಮ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಿ.ಎಚ್.ದೇವೇಗೌಡ ಸ್ಮಾರಕ ಉಚಿತ ವಾಚನಾಲಯದ ವತಿಯಿಂದ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಎಷ್ಟೇ ಹಣ ಸಂಪಾದನೆ ಮಾಡಿದರೂ ಅದನ್ನು ಸಾರ್ಥಕ ಸೇವೆಗೆ ಬಳಸದಿದ್ದರೆ ಬದುಕು ಪಾವನ ವಾಗುವುದಿಲ್ಲ. ಅದ್ದರಿಂದ ತನ್ನ ಊರಿನ ಶಾಲೆಗೆ ವರ್ಷಕ್ಕೆ ಒಂದು ನೂರು ರೂಪಾಯಿ ನೀಡಿದರೂ ಶಾಲೆ ಅಭಿವೃದ್ಧಿಯಾಗುತ್ತದೆ ಈ ನಿಟ್ಟಿನಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಗಳು ಆಶಕ್ತಿವಹಿಸುವುದು ಅವಶ್ಯಕವಾಗಿದೆ ಎಂದರು.
ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಸಮುದಾಯದ ಸಹಕಾರ, ನೆರವು ತುಂಬಾ ಅಗತ್ಯ. ಈ ಬಗ್ಗೆ ವಿದ್ಯಾವಂತ ಯುವಕರು, ಉದ್ಯೋಗಿಗಳು, ಸ್ಥಿತಿವಂತರು ಆಲೋಚನೆ ಮಾಡಬೇಕು ಇದರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ನಾಟಿವೈದ್ಯ ನಾಗರಾಜೇಗೌಡ ಅವರನ್ನು ಸನ್ಮಾನಿಸಿ ಮಾತನಾಡಿದ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕುಪ್ಪೆ ಜವರೇಗೌಡ ಮಾತನಾಡಿ ಈ ಶಾಲೆಯನ್ನು ಪ್ರಾಧ್ಯಾಪಕ ಪ್ರೋ.ಸಿ.ಡಿ.ಪರಶುರಾಮ್ ಅವರು ದತ್ತು ತೆಗೆದು ಕೊಂಡು ಶಾಲೆಯ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುವ ಕಾರ್ಯ ಶ್ಲಾಘನೀಯವಾಗಿದ್ದು ಉಳ್ಳವರು ಈ ರೀತಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಶ್ರಮಿಸಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕುಪ್ಪೆ ಗ್ರಾಮದ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದಾಶಿವಕೀರ್ತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ತುಳಸಿ, ಸದಸ್ಯರಾದ ಮಹದೇವ್, ಸರಸ್ವತಿ, ನಿವೃತ್ತ ಶಿಕ್ಷಕ ಹಿರಣ್ಣಯ್ಯ, ಗ್ರಾಮಸ್ಥರಾದ ಚಂದ್ರಶೇಖರ್,ಸುಬ್ಬೇಗೌಡ, ಸುರೇಂದ್ರ, ಚಂದ್ರಯ್ಯ, ಮುಖ್ಯ ಶಿಕ್ಷಕ ಮಲುಗನಹಳ್ಳಿ ಭಗಿರತ ,ಅಂಗನವಾಡಿ ಶಿಕ್ಷಕಿ ವರನಂದಿ, ಮೈಸೂರು ವಿವಿ ಸಂಜೆ ಕಾಲೇಜಿನ ಸಂಶೋಧಕರಾದ ಕ್ಯಾತನಹಳ್ಳಿ ಮಹೇಶ್ ,ಟೈಲರ್ ಬಸವೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.