ಬೆಂಗಳೂರು: ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ ಎನ್ನುವ ನಿಟ್ಟಿನಲ್ಲಿ ಸಾಕಾರಗೊಂಡಿದೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಇಂದು ಐದು ಸಾವಿರ ಮಂದಿ ಯೋಗಪಟುಗಳು ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಧ್ಯೇಯವಾಕ್ಯದಡಿಯಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮ ರಾಜ್ಯದ ಆಯುಷ್ ಇಲಾಖೆಯ ವತಿಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಪ್ರಸಿದ್ಧ ನಟ ಅನಿರುದ್ಧ್, ನಟಿ ಸಾನ್ಯಾ ಅಯ್ಯರ್ ಹಾಗೂ ನಟ ಶೈನ್ ಶೆಟ್ಟಿ ಉಪಸ್ಥಿತರಿದ್ದು, ಯೋಗ ಪ್ರದರ್ಶನದಲ್ಲಿ ಭಾಗವಹಿಸಿದರು. ಬೆಳಗ್ಗೆ 6 ಗಂಟೆಗೆ ಆರಂಭವಾದ ಈ ಯೋಗ ಉತ್ಸವವು 8:30ರ ವರೆಗೆ ನಡೆಯಿತು.
ಕಾರ್ಯಕ್ರಮದ ನಂತರ ಭಾಷಣ ಮಾಡಿದ ರಾಜ್ಯಪಾಲರು, ಯೋಗವನ್ನು ಭಾರತದ ಪಾರಂಪರಿಕ ಸಂಸ್ಕೃತಿಯ ಅಪೂರ್ವ ಕೊಡುಗೆಯೆಂದು ವರ್ಣಿಸಿದರು. “ಯೋಗ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದ ವಿಶ್ವಶ್ರೇಣಿಯ ಪರಿಕಲ್ಪನೆ. ಇದು ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವುದು ಮಾತ್ರವಲ್ಲದೆ, ಸಾಮಾಜಿಕ ಸಮರಸ್ಯ ಹಾಗೂ ಆರೋಗ್ಯಕರ ಜೀವನಕ್ಕೆ ದಾರಿ ತೋರಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ಯೋಗ ಎಲ್ಲರಿಗೂ ಲಾಭಕಾರಿಯಾಗಿದೆ ಎಂದು ತಿಳಿಸಿದ ಅವರು, “ನಾನು ಚಿಕ್ಕವಯಸ್ಸಿನಿಂದ ಯೋಗ ಅಭ್ಯಾಸ ಮಾಡುತ್ತಿದ್ದೇನೆ. ಇಂದು ಕೂಡ ನಿತ್ಯ ಯೋಗವನ್ನು ಮಾಡುತ್ತಿದ್ದೇನೆ. ಎಲ್ಲರೂ ನಿತ್ಯ ಯೋಗ ಅಭ್ಯಾಸ ಮಾಡಿ, ಅದನ್ನು ಜೀವನದ ಭಾಗವಾಗಿ ಸ್ವೀಕಾರ ಮಾಡೋಣ” ಎಂಬುದಾಗಿ ಜನತೆಗೆ ಮನವಿ ಮಾಡಿದರು.