ಪಾಟ್ನಾ: ಆರ್ ಜೆಡಿ ಜತೆಗಿನ ತಮ್ಮ ಮೈತ್ರಿ ಸರ್ಕಾರ ಇದ್ದ ಅವಧಿಯಲ್ಲಿ ಅಂದಿನ ಆರ್ ಜೆಡಿ ಸಚಿವರು ಬಹಳಷ್ಟು ಅಕ್ರಮಗಳನ್ನು ಎಸಗಿದ್ದಾರೆ ಎಂದು ತಿಳಿದು ಬಂದಿದ್ದು, ಇಂಥ ಎಲ್ಲ ಅಕ್ರಮಗಳ ಬಗ್ಗೆ ತಮ್ಮ ಸರ್ಕಾರ ತನಿಖೆ ನಡೆಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಆರ್ ಜೆಡಿ ಸಚಿವರಾದ ಲಲಿತ್ ಯಾದವ್ ಮತ್ತು ರಮಾನಂದ ಯಾದವ್ ನೇತೃತ್ವದಲ್ಲಿ ಎಲ್ಲ ಇಲಾಖೆಗಳು ತೆಗೆದುಕೊಂಡ ನಿರ್ಧಾರಗಳ ಪರಾಮರ್ಶೆಗೆ ಶುಕ್ರವಾರ ಆದೇಶ ಹೊರಡಿಸಿದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಯಾವುದೇ ಇಲಾಖೆಗಳಲ್ಲಿ ಯಾವುದೇ ಅಕ್ರಮಗಳು ನಡೆದಿದ್ದಲ್ಲಿ, ಅದನ್ನು ತನಿಖೆ ನಡೆಸುವುದು ಅಗತ್ಯ. ಅಕ್ರಮಗಳನ್ನು ನಾವು ಸಹಿಸುವುದಿಲ್ಲ ಎಂದರು. ನಾನು ಮಿತ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳ ಮುಖಂಡರ ಜತೆಗೆ ಕೂಡಾ ಒಳ್ಳೆಯ ಸಂಬಂಧ ಇರಿಸಿಕೊಳ್ಳುತ್ತೇನೆ ಎಂದು ಉತ್ತರಿಸಿದರು.