ಹೆತ್ತವರನ್ನು ಕಳೆದುಕೊಂಡ ಹಾಗೂ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳನ್ನು ಸಲಹುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳು ಊಟ, ವಸತಿ ನೀಡುವುದಕ್ಕೆ ಮಾತ್ರ ಸೀಮಿತಗೊಳ್ಳದೆ, ಪ್ರೀತಿ-ವಾತ್ಸಲ್ಯ, ಮಮತೆಯನ್ನು ಕೂಡ ಮಕ್ಕಳಿಗೆ ನೀಡುವುದಕ್ಕೆ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ ತಿಪ್ಪೇಸ್ವಾಮಿ ಹೇಳಿದರು.
ಅವರು ಸೋಮವಾರ ವೆನ್ಲಾಕ್ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಕ್ಕಳ ಸಹಾಯವಾಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿಸಿದ ಇಲಾಖೆಗಳು, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಕ್ಕಳ ಪಾಲನಾ ಸಂಸ್ಥೆಯವರಿಗೆ ಸಾಮಾಜಿಕ ತನಿಖಾ ವರದಿ, ವೈಯಕ್ತಿಕ ಪೆÇೀಷಣೆ ಯೋಜನೆ, ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷಾ ನೀತಿ, ಮಕ್ಕಳ ಹಕ್ಕುಗಳು ಮತ್ತು ರಕ್ಷಣಾ ಕಾಯಿದೆಗಳ ಮತ್ತು ಮಿಷನ್ ವಾತ್ಸಲ್ಯ ಪೆÇೀರ್ಟಲ್ ಮತ್ತು ಮಕ್ಕಳ ಕಡತ ನಿರ್ವಹಣೆ ಕುರಿತು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಾಲನಾ ಸಂಸ್ಥೆಗಳಿಗೆ ಮಕ್ಕಳು ಸಾಮಾಜಿಕ ಹಾಗೂ ಮಾನಸಿಕ ಆಘಾತದಿಂದ ಬರುತ್ತಿದ್ದು, ಬಹಳ ಜಾಗರೂಕತೆಯಿಂದ ಅವರನ್ನು ಸಲಹಬೇಕು. ಮಕ್ಕಳೊಂದಿಗೆ ತೋರಿಸುವ ವರ್ತನೆ ಬಹಳ ಮುಖ್ಯವಾಗಿದ್ದು, ಅಂತಿಮವಾಗಿ ಅವರನ್ನು ಕುಟುಂಬದೊಂದಿಗೆ ಬೆಳೆಯುವ ವಾತಾವರಣ ಒದಗಿಸುವುದು ಅತಿ ಮುಖ್ಯವಾಗಿದೆ ಎಂದು ಅವರು ಹೇಳಿದರು.
ವಿವಿಧ ರೀತಿಯ ಕೌಟುಂಬಿಕ ಸಮಸ್ಯೆಗಳು ಹಾಗೂ ಸಾಮಾಜಿಕ ಆಘಾತಗಳಿಂದ ಮಕ್ಕಳು ಬಹಳ ಖಿನ್ನರಾಗಿರುತ್ತಾರೆ. ಮಕ್ಕಳ ಮಾನಸಿಕ ಭಾವನೆಗಳನ್ನು ಅರ್ಥೈಸಿಕೊಳ್ಳುವ ವಾತಾವರಣ ಮಕ್ಕಳ ಪಾಲನ ಕೇಂದ್ರಗಳಲ್ಲಿ ಇರಬೇಕು. ಮಕ್ಕಳನ್ನು ಮತ್ತೆ ಕುಟುಂಬದೊಂದಿಗೆ ಸಂತೋಷದಲ್ಲಿ ಜೀವನ ಮುಂದುವರಿಸುವಂತೆ ಮಾಡುವ ಜವಾಬ್ದಾರಿ ಮಕ್ಕಳ ಪಾಲನ ಕೇಂದ್ರಗಳಿಗಿದೆ ಎಂದು ಅವರು ಹೇಳಿದರು.
ಬಾಲಪರಾಧ ಕಾಯ್ದೆ ಜಾರಿಗೆ ಬಂದ ಬಳಿಕ ದೇಶದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ಪ್ರಕರಣಗಳ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಮಕ್ಕಳ ಕಲ್ಯಾಣ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದು, ಎಲ್ಲಾ ಪೆÇಲೀಸ್ ಠಾಣೆಗಳಲ್ಲಿ ವಿಶೇಷ ಬಾಲಪರಾಧ ಪೆÇಲೀಸ್ ಘಟಕಗಳು ಅಸ್ತಿತ್ವದಲ್ಲಿವೆ. ಬಾಲಪರಾಧ ನಿರ್ವಹಣೆಗೆ ಪ್ರತ್ಯೇಕ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಡಾ.ಅಕ್ಷತಾ ಆದರ್ಶ್ ಮಾತನಾಡಿ, ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಆಪ್ತ ಸಮಾಲೋಚನೆ ಬಹು ಮುಖ್ಯವಾಗಿದೆ. ಇದಕ್ಕಾಗಿ ಸಮಿತಿಯು ಇಂತಹ ಸಂಸ್ಥೆಗಳಿಂದ ವರದಿ ಪಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸ ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆಗಳು ಕಾನೂನಿನ ಅಂಶಗಳನ್ನು ಸರಿಯಾಗಿ ಪಾಲಿಸಿಕೊಂಡು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕಾನೂನು ನೆರವನ್ನು ಕಾನೂನು ಸೇವಾ ಪ್ರಾಧಿಕಾರ ನೀಡಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ರೆನ್ನಿ ಡಿಸೋಜಾ, ವೆನ್ಲಾಕ್ ಆಸ್ಪತ್ರೆಯ ಡಾ. ಮಧುಸೂಧನ್, ಸಂಪನ್ಮೂಲ ವ್ಯಕ್ತಿ ಲಿಲ್ಲಿ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಸ್ವಾಗತಿಸಿದರು.
- ಮಂಗಳೂರಿನಿಂದ ಶಂಶೀರ್ ಬುಡೋಳಿ



