ಚಾಮರಾಜನಗರ: ಅಮರ ಪವಿತ್ರತೆಯ ಸಂಕೇತವಾಗಿ ,ಸಾಹಿತ್ಯ ಪ್ರಪಂಚದ ಪ್ರಥಮ ಮಹಿಳಾ ವಚನಗಾರ್ತಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಅಕ್ಕಮಹಾದೇವಿಯವರನ್ನು ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು, ಸಂಸ್ಕೃತಿ ಚಿಂತಕರವಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ 470ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದ ಸಂಸ್ಕೃತಿ, ಪರಂಪರೆ ,ಜೀವನ, ಸೌಂದರ್ಯ, ಆಧ್ಯಾತ್ಮ, ಸಾಮಾಜಿಕತೆ, ಲೌಕಿಕತೆಯ ಬಗ್ಗೆ ವಿಭಿನ್ನ ಚಿಂತನೆಗಳ ಮೂಲಕ ವಿವರಿಸಿದರು. ಸಾರ್ವಕಾಲಿಕ ತಾಯಿಯಾಗಿ ಜಗತ್ತಿಗೆ ಸ್ತ್ರೀ ಸಂವೇದನೆಯ ಮೂಲಕ ತಿಳಿಸಿದ ಶ್ರೇಷ್ಠ ಅಕ್ಕ ಎಂದು ತಿಳಿಸಿದರು.
ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಪದ್ಮ ಪುರುಷೋತ್ತಮ್ ನೆರವೇರಿಸಿ ಮಹಿಳೆಯರಿಗೆ ಅಕ್ಕಮಹಾದೇವಿ ಸದಾಕಾಲ ಸ್ಪೂರ್ತಿಯಾಗಿದ್ದಾರೆ. ಸಾವಿರ ವರ್ಷಗಳ ಹಿಂದೆ ಸ್ತ್ರೀ ಪ್ರತೀಕವಾಗಿ ತಮ್ಮ ದಿಟ್ಟತನದಿಂದ ಸಮಾಜವನ್ನು ಎದುರಿಸಿ ಸಮಾನತೆಯ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯನ್ನು ತಮ್ಮದೇ ದಾಟಿಯಲ್ಲಿ ಪರಿವರ್ತನೆಗೆ ಶ್ರಮಿಸಿದವರು ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಾವೇರಮ್ಮ ರವರು ಅಕ್ಕಮಹಾದೇವಿಯವರ ವಚನವನ್ನು ಹಾಡಿದರು.
ರಾಮಸಮುದ್ರದಜನಪದ ಮಹೇಶ್ ರವರು ವಚನ ಗಾಯನವನ್ನು ನೆರವೇರಿಸಿ ನೆರೆದವರನ್ನು ತನ್ಮಯತೆಗೆ ತಂದರು. ಅಕ್ಕಮಹಾದೇವಿಯ ವಚನಗಳು ಮನುಷ್ಯನಲ್ಲಿ ಹಲವಾರು ವಿಚಾರಗಳ ಮೂಲಕ ಜಾಗೃತಿ ಮೂಡಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ವಾಸಂತಿ ವಸುಪಾಲ್ ರವರು ಅಕ್ಕಮಹಾದೇವಿಯವರ ಜೀವನವನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಗೀತಾ, ಲಕ್ಷ್ಮಿ ,ಮೂರ್ತಿ ,ವಿಜಯ್, ಕಾರ್ತಿಕ್ ,ಮುಂತಾದವರು ಉಪಸ್ಥಿತರಿದ್ದರು.