ಪಿರಿಯಾಪಟ್ಟಣ: ಕನ್ನಡ ನಾಡು ನುಡಿ ಗೌರವಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರಾಗಬೇಕಿದೆ ಎಂದು ತಹಶಿಲ್ದಾರ್ ಕುಂ ಇ ಅಹಮದ್ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿ ದ್ವಜ ಸಂದೇಶ ನೀಡಿ ಅವರು ಮಾತನಾಡಿದರು, ಕನ್ನಡ ಎಂದರೆ ಅದು ನಮ್ಮ ಸಂಸ್ಕೃತಿ, ನಮ್ಮ ನಡೆ-ನುಡಿ, ನಮ್ಮ ಪರಂಪರೆ ಆಚಾರ ವಿಚಾರ, ಕಲೆ ಸಾಹಿತ್ಯದಿಂದ ಶ್ರೀಮಂತಗೊಳಿಸಿದ ನಾಡಿನ ಧರ್ಮವಾಗಿದೆ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗಾ ಗ್ರಾಮದಲ್ಲಿ ಜನಿಸಿದ ಕರ್ನಾಟಕ ಕಂಡ ಧೀಮಂತ ನಾಯಕ ರಾಜಕೀಯ ಮುತ್ಸದ್ದಿ ಸಾಮಾಜಿಕ ನ್ಯಾಯಾಧ ಹರಿಕಾರ ಡಿ.ದೇವರಾಜು ಅರಸು ರವರು ಮುಖ್ಯಮಂತ್ರಿಗಳಾಗಿದ್ದಾಗ 1973 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು ಎಂದರು.

ನಿವೃತ್ತ ಕನ್ನಡ ಸಹ ಪ್ರಾಧ್ಯಾಪಕರಾದ ಡಾ.ದ ಸತೀಶ್ ಚಂದ್ರ ಅವರು 50ನೇ ಸುವರ್ಣ ಸಂಭ್ರಮದ ವಿಶೇಷ ಭಾಷಣ ಮಾಡಿದರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಗೊರಹಳ್ಳಿ ಜಗದೀಶ್ ಅವರು ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಮಾಡಿದರು, ಸರಿಗಮಪ ಖ್ಯಾತಿಯ ಪಿರಿಯಾಪಟ್ಟಣ ತಾಲೂಕಿನ ಗುರುಪ್ರಸಾದ್ ಹಲವು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಚಿತ್ರನಟ ಪುನೀತ್ ರಾಜಕುಮಾರ್ ಅವರ ಬೊಂಬೆ ಹೇಳುತೈತೆ ಹಾಡು ಹಾಡುವಾಗ ಚಿತ್ರ ಕಲಾವಿದ ಪವನ್ ಅವರು ತಾಯಿ ಭುವನೇಶ್ವರಿ ಚಿತ್ರ ರಚಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು, ಪಟ್ಟಣದ ಸಾರಿಗೆ ಘಟಕ ನೌಕರ ನಿರ್ವಾಹಕ ಇರ್ಫಾನ್ ಆಲಿ ಅವರು ಸಾರಿಗೆ ಘಟಕದ ಮಾದರಿ ರಚಿಸಿ ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು, ಚಿತ್ರಕಲಾವಿದ ಪವನ್ ಹಾಗೂ ನಿರ್ವಾಹಕ ಇರ್ಫಾನ್ ಆಲಿ ಅವರನ್ನು ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭ ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್, ಬಿಇಓ ಬಸವರಾಜು, ಪುರಸಭಾ ಮುಖ್ಯಾಧಿಕಾರಿ ಮುತ್ತಪ್ಪ, ಸದಸ್ಯರಾದ ರವಿ, ಪಿ.ಸಿ ಕೃಷ್ಣ, ಎಚ್.ಕೆ ಮಂಜುನಾಥ್, ನಿರಂಜನ್, ಶಿರಸ್ತೆದಾರ್ ಟ್ರಿಜಾ, ಶಕೀಲಾ ಬಾನು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್, ನಗರ ಘಟಕ ಅಧ್ಯಕ್ಷ ಶಿಕ್ಷಕ ಎನ್.ಆರ್ ಕಾಂತರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಸಿಡಿಪಿಓ ಮಮತಾ, ಆಹಾರ ಇಲಾಖೆ ಶಿರಸ್ತೆದಾರ್ ಸಣ್ಣಸ್ವಾಮಿ, ಆರ್ ಡಬ್ಲ್ಯೂಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಮೂರ್ತಿ, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಬಿಸಿಎಂ ವಿಸ್ತರಣಾಧಿಕಾರಿ ಹರೀಶ್ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
