ಮಂಡ್ಯ: ಗಣೇಶನ ವಿಸರ್ಜನೆಯ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಹೊತ್ತಿ ಉರಿದ ಬೆಂಕಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯಲ್ಲೀಗ 50ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಲಾಗಿದೆ. ಅವರಲ್ಲಿ ಅಮಾಯಕರ ಬಂಧನವೂ ಆಗಿದೆ ಅನ್ನೋ ವಾದವೂ ಕೂಡ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಚಲುವಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾಗಮಂಗಲ ಗಲಭೆಯಲ್ಲಿ ಅಮಾಯರಕರನ್ನು ಬಂಧಿಸಿದ್ದು ನಿಜ, ಇದನ್ನು ನಾನು ಒಪ್ತೀನಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಗಲಭೆಯ ವಿಚಾರವಾಗಿ ಮಾತನಾಡಿದ ಚಲುವರಾಯಸ್ವಾಮಿ, ಇಲ್ಲಿ ಎಫ್ಐಆರ್ ಅಂತಿಮ ಅಲ್ಲ, ಪ್ರಕರಣದ ತನಿಖೆ ಅಂತಿಮ. ನನ್ನ ಆಪ್ತ ರಾಜೇಶ್ ಈ ಗಲಾಟೆಯಲ್ಲಿ ಭಾಗಿಯಾಗಿಲ್ಲ. ಅವರ ಮಗ ಮಾತ್ರ ಭಾಗಿಯಾಗಿದ್ದಾನೆ ಎಂದು ಆಪ್ತ ರಾಜೇಶ್ ಬಂಧಿಸದ ವಿಚಾರದ ಬಗ್ಗೆ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ನಾಗಮಂಗಲದ ಗಲಭೆ ಬಗ್ಗೆ ಕಿಡಿಕಾರಿದ್ದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿದ ಚಲುವರಾಯಸ್ವಾಮಿ, ನಾಗಮಂಗಲಕ್ಕೆ ಬಂದು ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದು ಯಾಕೆ? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರವೇ ಹೊಣೆ ಎಂದಿದ್ದಾರೆ.
ಯಾರೇನೇ ಮಾತನಾಡಿದ್ರೂ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಆಗಿರೋ ಗಲಾಟೆ ಬಗ್ಗೆ ಮಾತನಾಡುತ್ತಾ ಕುಳಿತರೇ ಆಗಲ್ಲ, ಮುಂದೆ ಜನ ಬದುಕಬೇಕು. ಶಾಂತಿ ಸಭೆ ಅನಿವಾರ್ಯ, ಎಲ್ಲರೂ ಒಗ್ಗಟ್ಟಾಗಿ ಇರಬೇಕಾಗುತ್ತೆ. ಯಾರೇನೇ ಮಾತನಾಡಿದ್ರು ತಲೆ ಕೆಡಿಸಿಕೊಳ್ಳಲ್ಲ ಎಂದಿರುವ ಚಲುವರಾಯಸ್ವಾಮಿ ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ.