ಬೆಂಗಳೂರು: ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿರುವುದಕ್ಕೆ ವಿರೋಧ ಭುಗಿಲೆದ್ದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್. ಅಶೋಕ್, “ನಂದಿನಿ ಬ್ರ್ಯಾಂಡ್ ಸರ್ವನಾಶ ಮಾಡಲು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಅವರು ಟ್ವೀಟ್ ಮಾಡಿದ್ದು ಹೀಗಿದೆ: “ಚುನಾವಣಾ ಪ್ರಚಾರದ ವೇಳೆ ನಂದಿನಿ ಹೆಸರನ್ನು ಉಪಯೋಗಿಸಿದ್ದ ಕಾಂಗ್ರೆಸ್, ಇದೀಗ ಅದನ್ನೇ ನಾಶಪಡಿಸಲು ಮುಂದಾಗಿದೆ. ಹಾಲು ಉತ್ಪಾದಕರಿಗೆ ನೂರಾರು ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ನಂದಿನಿಯ ಮಾರುಕಟ್ಟೆ ವಿಸ್ತರಿಸಿದ್ದ ಎಂಡಿ ಎಂ.ಕೆ. ಜಗದೀಶ್ ಅವರನ್ನು ದಿಢೀರನೆ ವರ್ಗಾಯಿಸಿದೆ.”
ಅದೇ ವೇಳೆ, ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಡೈರಿ ಮಳಿಗೆಗಳಿಗಾಗಿ ಬಿಎಂಆರ್ಸಿಎಲ್ ಕರೆದಿದ್ದ ಟೆಂಡರ್ಗೆ ಕೆಎಂಎಫ್ ಆಸಕ್ತಿ ತೋರಿಲ್ಲ ಎನ್ನುವುದು ದುಃಖದ ವಿಷಯ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. “ನಮ್ಮ ನಾಡಿನ ರೈತರು ಕಟ್ಟಿದ ನಂದಿನಿ ಬ್ರ್ಯಾಂಡ್ನ ಸರ್ವನಾಶಕ್ಕೆ ಸಿಎಂ ಬದ್ಧರಾಗಿರುವಂತಿದೆ,” ಎಂದು ಆರೋಪಿಸಿದರು.